ತಿರುವಳ್ಳುವರ್ ಪ್ರತಿಮೆಗೆ ಕನ್ನಡಪರ ಸಂಘ ವಿರೋಧ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣರಾವ್, ಇದೇ ಆಗಸ್ಟ್ ತಿಂಗಳಲ್ಲಿ ವಿವಾದಿತ ತಿರುವಳ್ಳವರ್ ಪ್ರತಿಮೆ ಸ್ಥಾಪನೆ ಮಾಡಲು ಸರಕಾರ ಹೊರಟಿರುವುದು ಖಂಡನೀಯ ಎಂದರು. ತಿರುವಳ್ಳವರ್ ಪ್ರತಿಮೆ ಸ್ಥಾಪನೆ ಮಾಡುವುದರಿಂದ ಕನ್ನಡ ಮತ್ತು ತಮಿಳಕ ಮಧ್ಯೆ ಮತ್ತಷ್ಟು ಕಂದಕ ಹುಟ್ಟು ಹಾಕಿದಂತಾಗುತ್ತದೆ. ಅದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕನ್ನಡ ಭಾಷೆಗೆ ನೀಡಿದ ಶಾಸ್ತ್ರೀಯ ಭಾಷೆ ಸ್ಥಾನಕ್ಕೆ ತಮಿಳುನಾಡು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ತಂದಿದೆ. ಅದನ್ನು ನಾವು ಕ್ಷಮಿಸುವುದಿಲ್ಲ. ತಮಿಳುನಾಡಿನ ಯಾವುದೇ ರಸ್ತೆಗಳಿಗೂ ಕರ್ನಾಟಕದ ನಾಯಕರ, ಕವಿಗಳ ಹೆಸರಿಲ್ಲ. ಆದರೆ, ಕರ್ನಾಟಕದಲ್ಲಿ ತಿರುವಳ್ಳವರ್ ಪ್ರತಿಮೆ ಏಕೆ ಬೇಕೆ ಎಂದು ಗುರುದೇವ್ ಪ್ರಶ್ನಿಸಿದರು. ಸ್ವಾತಂತ್ರ್ಯ ಪೂರ್ವ ಕಾಲದಿಂದ ತಮಿಳುನಾಡು ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಸುತ್ತಲೇ ಬಂದಿದೆ. ಕಾವೇರಿ ವಿವಾದ, ರಾಜಕುಮಾರ ಅಪಹರಣ, ಮಾಜಿ ಸಚಿವ ನಾಗಪ್ಪ ಅಪಹರಣ, ಹೊಗೇನಕಲ್ ವಿವಾದ ಎಲ್ಲ ವಿಷಯಗಳಲ್ಲೂ ನಮಗೆ ತಮಿಳುನಾಡಿನ ನಾಯಕರು ಅನ್ಯಾಯ ಮಾಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications