ಮದುವೆಗೆ ಮಂಗಳಸೂತ್ರ ಕಡ್ಡಾಯವಲ್ಲ : ಕೋರ್ಟ್
ಚೆನ್ನೈ, ಜು. 17 : ಮದ್ರಾಸ್ ಹೈಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡಿದ್ದು, ಹಿಂದು ಪದ್ಧತಿಯಡಿ ವಿವಾದವಾಗಿರುವುದನ್ನು ಸಾಬೀತುಪಡಿಸಲು ಹೆಣ್ಣಿನ ಕೊರಳಿಗೆ ಗಂಡು ಮಂಗಳಸೂತ್ರವನ್ನು ಕಟ್ಟುವುದು ಕಡ್ಡಾಯವೇನಲ್ಲ. ಹೆಣ್ಣಿನ ಕೊರಳಿಗೆ ಗಂಡು ಮಂಗಳಸೂತ್ರ ಕಟ್ಟದೇ ಇದ್ದರೂ ಹಿಂದೂ ವಿವಾದ ಕಾಯ್ದೆಯ ಸೆಕ್ಷನ್ 7ರಲ್ಲಿ ಹೇಳಲಾಗಿರುವಂತೆ ವಿವಾಹ ಸಮಾರಂಭವು ನಡೆದಿರುವುದಕ್ಕೆ ಇತರೆ ಯಾವುದಾದರೂ ಸಾಕ್ಷ್ಯಗಳಿದ್ದರೂ ಆಗ ಮದುವೆ ಆಗಿರುವುದು ರುಜುವಾತಾಗುತ್ತದೆ ಎಂದು ಹೇಳಿದೆ.
ಕಲಾದರ್ ಎಂಬ ವ್ಯಕ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಎಂ ಎಂ ಸುಂದರೇಶ್ ಈ ತೀರ್ಪು ನೀಡಿದ್ದಾರೆ. 21 ರ ಹರೆಯದ ಮಹಿಳೆಯ ಜೊತೆ ಕಲಾದರ್ ವಿವಾಹವಾಗಿದ್ದು ನಿಜ ಎಂದು ಕೆಳ ನ್ಯಾಯಾಲಯ ಈ ಹಿಂದೆ ತೀರ್ಪು ನೀಡಿತ್ತು. ಆದರೆ, ತಾನು ಆ ಯುವತಿಗೆ ತಾಳಿಯನ್ನೇ ಕಟ್ಟಿಲ್ಲ. ಹೀಗಾಗಿ ಅದು ಮದುವೆ ಆಗುವುದಿಲ್ಲ ಎಂದು ಕಲಾದರ್ ವಾದಿಸಿದ್ದ.
ದೇವಾಲಯದಲ್ಲಿ ಪುರೋಹಿತರ ಸಮ್ಮುಖದಲ್ಲಿ ನಾವಿಬ್ಬರು ಹಾರ ಬದಲಾಯಿಸಿದ್ದೇವೆ ಎಂದು ಯುವತಿ ವಾದಿಸಿದ್ದರು. 1987 ಡಿಸೆಂಬರ್ 13 ರಂದು ದೇವಾಲಯದಲ್ಲಿ ಈ ಇಬ್ಬರು ಹಾರ ಬದಲಿಸಿಕೊಂಡಿದ್ದರು. ವರದಕ್ಷಿಣೆದೆ ಸಂಬಂಧಿಸಿದಂತೆ ಕಲಾದರ್ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಮಹಿಳೆ ನ್ಯಾಯಾಲಯದಲ್ಲಿ ವಿವರಣೆ ನೀಡಿದ್ದಳು.
(ಏಜನ್ಸೀಸ್)