ಅಭಿಷೇಕ್ ಪ್ರಕರಣ ತನಿಖೆಗೆ ಆದೇಶ
ಜೆಡಿಎಸ್ ನ ಅಬ್ದುಲ್ ಅಜೀಮ್ ಅವರ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ಅಗ್ನಿಶಾಮಕ ಪಡೆ, ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಮತ್ತಿತರ ಭದ್ರತಾದಳದ ತಂಡಗಳು ಅವಿರತ ಶೋಧ ನಡೆಸಿದರಾದರೂ ಬಾಲಕ ಪತ್ತೆಯಾಗಿಲ್ಲ ಎಂದು ಹೇಳಿದರು.
ಘಟನೆ ನಡೆದ ನಂತರ ತಾವು ಸ್ಥಳಕ್ಕೆ ಧಾವಿಸಿದ್ದಾಗಿಯೂ, ಶೋಕತಪ್ತ ತಂದೆತಾಯಿಗೆ ಸಾಂತ್ವನ ಹೇಳಿ ಪರಿಹಾರ ಧನ ನೀಡಿದುದಾಗಿಯೂ ಯಡಿಯೂರಪ್ಪ ತಿಳಿಸಿದರು. ಬಾಲಕನ ಪತ್ತೆಗೆ ಶತಪ್ರಯತ್ನ ಮಾಡಿದುದನ್ನು ಪುನರುಚ್ಛರಿಸಿದರು. ಈ ಘಟನೆಯಿಂದ ಬಿಬಿಎಂಪಿ ಅಧಿಕಾರಿಗಳ ಮೇಲೆ ಸಾರ್ವಜನಿಕರಿಂದ ಭಾರೀ ಟೀಕೆ ಬಂದುದನ್ನು ಅವರು ನೆನಪಿಸಿಕೊಂಡರು.
ಆಗಿದ್ದಾಯಿತು. ಮುಂದೆ ಇಂಥ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗನ್ನು ಕೈಗೊಳ್ಳಲಾಗಿದೆ ಎಂದರು ಬಿಎಸ್ವೈ. ತೆರೆದುಕೊಂಡಿರುವ ನಗರದ ದೊಡ್ಡ ಚರಂಡಿಗಳಿಗೆ ಎರಡೂ ಬದಿ ಒಟ್ಟು 143 ಕಿ.ಮೀ ಬೇಲಿ ಹಾಕಲು ತೀರ್ಮಾನಿಸಲಾಗಿದೆ. ಈಗಾಗಲೇ 43 ಕಿ.ಮೀ ಉದ್ದದ ಬೇಲಿ ಹಾಕಲಾಗಿದೆ ಎಂದರು.
ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಇನ್ನೊಬ್ಬ ಜೆಡಿಎಸ್ ಸದಸ್ಯ ಎಂ. ಸಿ. ನಾಣಯ್ಯ, ಬಾಲಕನ ನಾಪತ್ತೆ ಪ್ರಕರಣ ಗಂಭೀರವಾದ ಲೋಪ, ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
(ದಟ್ಸ್ ಕನ್ನಡ ವಾರ್ತೆ)