ಆರ್ ಟಿ ನಗರ ಠಾಣೆಯಲ್ಲಿ ಲಾಕಪ್ ಡೆತ್?
ಬೆಂಗಳೂರು, ಜು.11: ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಮಂಜುನಾಥ್(26) ಎಂಬ ಯುವಕ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಮೃತನ ಕುಟುಂಬದವರು ಇದು ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಸಮೀಕ್ಷಿಸುತ್ತಿದ್ದಾರೆ.
ಆಟೋ ಚಾಲಕನಾಗಿ ಕೆಲಸ ಮಾಡುತ್ತಿರುವ ಮಂಜುನಾಥ್ ಬೆಂಗಳೂರಿನ ಮನೋರಾಯನ ಪಾಳ್ಯದ ನಿವಾಸಿ. ಆರ್ ಟಿ ನಗರ ಪೊಲೀಸರು ಶುಕ್ರವಾರ ರಾತ್ರಿ ಆತನನ್ನು ಠಾಣೆಗೆ ಕರೆದೊಯ್ಡು ವಿಚಾರಣೆ ನಡೆಸುವಾಗ ಸುಮಾರು 2.30ರ ಸಮಯದಲ್ಲಿ ಕುಸಿದು ಬಿದ್ದ ಎನ್ನಲಾಗಿದೆ.ಚಿಕಿತ್ಸೆಗಾಗಿ ಕೂಡಲೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಮಂಜುನಾಥ್ ಬದುಕುಳಿಯಲಿಲ್ಲ ಎನ್ನುತ್ತವೆ ಮೂಲಗಳು.
''ಎದೆಯ ಮೇಲೆ, ಕಾಲು ಮತ್ತು ಕೈಗಳ ಮೇಲೆ ಪೊಲೀಸ್ ಲಾಠಿ ಏಟಿನ ಗಾಯದ ಗುರುತುಗಳಿವೆ. ಪೊಲೀಸರ ಹಿಂಸೆಯನ್ನು ತಾಳಲಾರದೆ ಮಂಜುನಾಥ್ ಮೃತಪಟ್ಟಿದ್ದಾನೆ. ಇದು ಲಾಕಪ್ ಡೆತ್'' ಎಂದು ಮಂಜುನಾಥ್ ಅವರ ಕುಟುಂಬದವರು ಆರೋಪಿಸಿದ್ದಾರೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗುತ್ತಿದೆ. ಬೌರಿಂಗ್ ಆಸ್ಪತ್ರೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ ಆರ್ ಪೂಜಾರ್ ಆಗಮಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications