ಗುರುತು ಚೀಟಿ ಯಜ್ಞಕ್ಕೆ ನಂದನ್ ಸಮರ್ಪಣೆ

ವಿಶ್ವದ ಅಗ್ರಮಾನ್ಯ ಹತ್ತು ಅತ್ಯುತ್ತಮ ಕಂಪನಿಗಳಲ್ಲಿ ಒಂದಾಗಿರುವ ಇನ್ಫೋಸಿಸ್ ಕಂಪನಿಯನ್ನು ಈ ಮಟ್ಟಕ್ಕೆ ತರುವುದಕ್ಕೆನಿಲೇಕಣಿ ಅವರ ಬುದ್ಧಿಮತ್ತೆ ಮತ್ತು ಪರಿಶ್ರಮದ ಕಾಣಿಕೆ ಅಪಾರ. 1981ರಲ್ಲಿ ಸಂಸ್ಥೆ ಸ್ಥಾಪಿಸಿದಂದಿನಿಂದ ಸಾಮಾನ್ಯ ನೌಕರನಾಗಿ, ಮುಖ್ಯ ನಿರ್ವಹಣಾಧಿಕಾರಿಯಾಗಿ, ಮ್ಯಾನೇಜಿಂಗ್ ಡೈರೆಕ್ಟರಾಗಿ ನಂತರ ಸಹ-ಅಧ್ಯಕ್ಷರಾಗಿ ವಿವಿಧ ಮಜಲುಗಳನ್ನು ನಿಲೇಕಣಿ ಕಂಡಿದ್ದಾರೆ. ಅತೀ ಶ್ರೀಮಂತ ಸಿಇಓಗಳಲ್ಲಿ ನಂದನ್ ಒಬ್ಬರಾಗಿದ್ದರೂ ಅತ್ಯಂತ ಸರಳ ಜೀವಿ. ಸದಾ ಹಸನ್ಮುಖಿ. ತರಬೇತಿಯಲ್ಲಿರುವ ಸಿಬ್ಬಂದಿಯಿಂದ ಹಿಡಿದು ಹಿರಿಯ ಉದ್ಯೋಗಿಗಳವರೆಗೂ ಅವರು ಯಾವುದೇ ಸಮಯದಲ್ಲಿ ಲಭ್ಯರಿದ್ದರು ಮತ್ತು ಸಹಾಯ, ಮಾರ್ಗದರ್ಶನ ಮಾಡಲು ಯಾವತ್ತೂ ಸಿದ್ಧರಿದ್ದರು.
ನಿಲೇಕಣಿ ಅವರ ಅಣತಿಯಂತೆ ಜುಲೈ 9ರ ಗುರುವಾರ ಸಂಜೆ ಬೀಳ್ಕೊಡುಗೆ ಸಮಾರಂಭ ಕೂಡ ಅತ್ಯಂತ ನಿರಾಡಂಬರವಾಗಿ ನಡೆಯಲಿದೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕೇಂದ್ರ ಕಚೇರಿಯ ಆಂಪಿ ಥಿಯೇಟರ್ ನಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಇನ್ಫೋಸಿಸ್ ನ ಎಲ್ಲ ಉದ್ಯೋಗಿಗಳಿಗೆ ಆಹ್ವಾನ ನೀಡಲಾಗಿದೆ. ಈ ಆತ್ಮೀಯ ಸಮಾರಂಭದಲ್ಲಿ ಇನ್ಫೋಸಿಸ್ ಕಟ್ಟಿದ ಎಲ್ಲ ಗಣ್ಯರು ಭಾಗವಹಿಸಲಿದ್ದಾರೆ.
ಕಂಪನಿಯ ನಿರ್ದೇಶಕರು ಮತ್ತು ನಿಲೇಕಣಿ ಅವರೊಡನೆ ಒಡನಾಡಿದ ಕೆಲ ಕಿರಿಯ ಉದ್ಯೋಗಿಗಳು ನಿಲೇಕಣಿ ಜೊತೆ ಪಡೆದ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ನಿಲೇಕಣಿ ಕೂಡ ಉದ್ಯೋಗಿಗಳನ್ನು ಉದ್ದೇಶಿಸಿ ಕೊನೆಗೆ ಮಾತನಾಡಲಿದ್ದಾರೆ. ಭಾರತದ ಗುರುತು ಚೀಟಿ ಪ್ರಾಧಿಕಾರದ ಚುಕ್ಕಾಣಿ ಹಿಡಿಯಲು ಇನ್ಫೋಸಿಸ್ ತೊರೆಯುತ್ತಿರುವ ನಿಲೇಕಣಿ ಕಳೆದ ಒಂದು ವಾರದಿಂದ ಕಂಪನಿಯ ಉದ್ಯೋಗಿಗಳಿಗೆ ಕಚೇರಿಯ ದ್ವಾರವನ್ನು ಮುಕ್ತವಾಗಿಟ್ಟಿದ್ದರು.
ಸಂಸ್ಥೆ ಸ್ಥಾಪಿಸಿದಂದಿನಿಂದ ಇಂದಿನವರೆಗೆ ನಡೆದ ಎಲ್ಲ ತ್ರೈಮಾಸಿಕ ಫಲಿತಾಂಶ ಪ್ರಕಟಣೆಯಲ್ಲಿ ನಿಲೇಕಣಿ ಭಾಗವಹಿಸಿದ್ದಾರೆ. ಆದರೆ, ನಾಳೆ ನಡೆಯಲಿರುವ ತ್ರೈಮಾಸಿಕ ಫಲಿತಾಂಶ ಪ್ರಕಟಣಾ ಸಭೆಯನ್ನು ನಿಲೇಕಣಿ ಪ್ರಥಮ ಬಾರಿಗೆ ತಪ್ಪಿಸಿಕೊಳ್ಳುತ್ತಿದ್ದಾರೆ. ನಿಲೇಕಣಿ ಅತ್ಯಂತ ಮೃದು ಸ್ವಭಾವದವರಾಗಿದ್ದರೂ ಸಂದರ್ಭಕ್ಕೆ ತಕ್ಕಂತೆ ಅತೀ ಕಠಿಣ ಕ್ರಮ, ನಿರ್ಣಯ ಕೈಗೊಳ್ಳುವುದಕ್ಕೆ ಎಂದೂ ಹಿಂದೆ ನೋಡುತ್ತಿರಲಿಲ್ಲ ಎಂಬುದು ಕಂಪನಿಯ ಹಿರಿಯ ಉದ್ಯೋಗಿಯೊಬ್ಬರ ಉವಾಚ.
ಜಾಗತಿಕ ಮಾಹಿತಿ ತಂತ್ರಜ್ಞಾನ ಪಥದಲ್ಲಿ ನಿಲೇಕಣಿ ಇಲ್ಲದೆಯೆ ಮುನ್ನುಗ್ಗುವ ಎಲ್ಲ ಸಾಮರ್ಥ್ಯ ಇನ್ ಫೊಸಿಸ್ ಕಂಪನಿಗೆ ಇದ್ದರೂ ಸಹ ಒಂದು ಬಗೆಯ ಮೌನ ಕಂಪನಿಯನ್ನು ಕಾಡಲಿದೆ. ಆದರೂ, ನೂರಾರು ಕೋಟಿ ಪ್ರಜೆಗಳ ಈ ರಾಷ್ಟ್ರದಲ್ಲಿ ಪ್ರತಿಯೊಬ್ಬನಿಗೂ ಗುರುತು ಚೀಟಿ ಕೊಡುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸಲು ದೆಹಲಿಯತ್ತ ಮುಖಮಾಡಿರುವ ನಿಲೇಕಣಿ ಅವರ ಬಗ್ಗೆ ಇನ್ಫೋಸಿಯಾನ್ಸ್ ಸಮುದಾಯಕ್ಕೆ ಹೆಮ್ಮೆ. ಹಾಗೆ ನೋಡಿದರೆ ಇಡೀ ಇನ್ಫೋಸಿಸ್ ಬಳಗಕ್ಕೆ ನಂದನ್ ಅವರನ್ನು ದೇಶ ಸೇವೆಗೆ ಸಮರ್ಪಿಸುತ್ತಿರುವ ಧನ್ಯತಾಭಾವ ಆವರಿಸಿದೆ.












Click it and Unblock the Notifications