ನನಗೆ ಜನರ ಹಿತ ಮುಖ್ಯ : ಸೋಮಣ್ಣ
ಬೆಂಗಳೂರು, ಜು. 6 : ನನ್ನ ರಾಜಕೀಯ ಜೀವನದಲ್ಲಿ ಯಾವುದಾದರೂ ತಪ್ಪು ಮಾಡಿರುವುದಾಗಲೀ, ಇಲ್ಲವೆ ಸಣ್ಣ ನೋವುಂಟು ಮಾಡಿರುವುದಾಗಲೀ ಸಾಬೀತಾದಲ್ಲಿ ಕ್ಷಣ ಮಾತ್ರವೂ ಈ ಸಚಿವ ಸ್ಥಾನದಲ್ಲಿ ಉಳಿಯವುದಿಲ್ಲ ಎಂದು ಮುಜರಾಯಿ ಖಾತೆ ಸಚಿವ ವಿ ಸೋಮಣ್ಣ ಹೇಳಿದರು.
ನಗರದ ನಯನ ಸಭಾಂಗಣದಲ್ಲಿ ವಾಣಿಜ್ಯೋಧ್ಯಮಿಗಳ ಸಂಘಟನೆಗಳು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಾಮಗಾರಿಗೆ ಸಂಬಂಧಿಸಿದಂತೆ ಇಂಜಿನಿಯರೊಬ್ಬರನ್ನು ಶನಿವಾರ ತರಾಟೆಗೆ ತೆಗೆದುಕೊಂಡ ಪ್ರಸ್ತಾಪಿಸಿದ ಅವರು, ನನಗೆ ಜನರು ಮುಖ್ಯ. ಅವರ ಸಮಸ್ಯೆ ಬಗೆಹರಿಸುವುದು ನನ್ನ ಪರಮ ಕರ್ತವ್ಯ ಎಂದರು.
ಮೂಲಸೌಕರ್ಯಕ್ಕಾಗಿ ಜನರು ಆಗಾಗ್ಗೆ ದೂರುತ್ತಿದ್ದರು. ಸಮಸ್ಯೆ ಪರಿಹಾರಗೊಂಡಿಲ್ಲ ಎಂದು ಹೇಳುತ್ತಿದ್ದರು. ಈ ಕಾರಣದಿಂದ ಟಿ ದಾಸರಹಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸಮಸ್ಯೆ ಇರುವುದು ಕಂಡು ನನಗೆ ತೀವ್ರ ಬೇಸರವಾಯಿತು. ಆಗ ಸಂಬಂಧಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡೆ ಎಂದು ವಿವರಿಸಿದರು.
ಸೋಮಣ್ಣ ರಾಜೀನಾಮೆಗೆ ಡಿಕೆಶಿ ಒತ್ತಾಯ
ಉರಿಯುವ ಮನೆಯಲ್ಲಿ ಗಳ ಹಿರಿಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷ ಇಂಜಿನಿಯರ್ ಅಸ್ವಸ್ಥತೆಯನ್ನು ರಾಜಕೀಕರಣಗೊಳಿಸಲು ಯತ್ನಿಸುತ್ತಿದ್ದು, ಸಚಿವ ಸೋಮಣ್ಣ ಅವರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಇಂಜಿನಿಯರ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ನೀಡಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಬಿಜೆಪಿ ಸಂಸ್ಕೃತಿ ಸೋಮಣ್ಣ ಅವರ ವರ್ತನೆಯಿಂದ ತಿಳಿಯುತ್ತಿದೆ. ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications