ಹೊಗೇನಕಲ್ ಯೋಜನೆ ಕೈಬಿಡುವುದಿಲ್ಲ: ಸ್ಟಾಲಿನ್
ಚೆನ್ನೈ,ಜೂ.30:ವಿವಾದಿತ ಹೊಗೇನಕಲ್ ಯೋಜನೆಯ ಕಾಮಗಾರಿ ಇನ್ನು ನಾಲ್ಕು ತಿಂಗಳಲ್ಲಿ ಆರಂಭವಾಗಲಿದೆ. 2012 ರೊಳಗೆ ಸಂಪೂರ್ಣವಾಗಲಿದೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೋಮವಾರ ಘೋಷಿಸಿದರು.
ಇದೇ ವೇಳೆ ಕಾವೇರಿ ನೀರನ್ನೇ ಬಳಸಿಕೊಂಡು ವೆಲ್ಲೂರಿಗೆ 1400 ಕೋಟಿ ರು. ವೆಚ್ಚದಲ್ಲಿ ಕುಡಿಯುವ ನೀರು ಪೂರೈಸಲು ಯೋಜನೆ ಸಿದ್ಧಪಡಿಸುವುದಾಗಿ ಘೋಷಿಸಿದ್ದಾರೆ. ಈ ನಡುವೆ, ಹೊಗೇನಕಲ್ ವಿಷಯದಲ್ಲಿ ಪ್ರಧಾನಿಗಳು ಕೂಡಲೇ ಮಧ್ಯಪ್ರವೇಶಿಸಿ, ಕರ್ನಾಟಕ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳ ಸಭೆ ಕರೆದು ವಿವಾದ ಬಗೆ ಹರಿಸಬೇಕು ಎಂದು ರಾಜ್ಯದ ಜಲಸಂಪನ್ಮೂಲ ಸಚಿವ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಹೊಗೇನಕಲ್ ಕುಡಿಯುವ ನೀರಿನ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು. ನಗರಾಡಳಿತ ಹಾಗೂ ನೀರು ಸರಬರಾಜು ಇಲಾಖೆಯ ಅನುದಾನ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹೊಗೇನಕಲ್ ಯೋಜನೆಗೆ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಬ್ಯಾಂಕ್ ನಿಂದ ಸಾಲ ಕೇಳಲು ತಾವೇ ಜಪಾನ್ ಗೆ ಭೇಟಿ ನೀಡಿದ್ದಾಗಿ ತಿಳಿಸಿದರು.ವೆಲ್ಲೂರಿಗೂ ಕಾವೇರಿಯಿಂದ ಕುಡಿಯುವ ನೀರಿನ ಯೋಜನೆ ಸಿದ್ಧಪಡಿಸುವುದಾಗಿ ಸ್ಟಾಲಿನ್ ಪ್ರಕಟಿಸಿದರು.
ಜಂಟಿ ಸಮೀಕ್ಷೆಗೆ ಬೊಮ್ಮಾಯಿ ಆಗ್ರಹ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಈ ಹೊಗೇನಕಲ್ ವಿವಾದ ಕುರಿತಂತೆ ಉಭಯ ರಾಜ್ಯಗಳ ನಡುವಿನ ಗಡಿಯನ್ನು ಜಂಟಿ ಸಮೀಕ್ಷೆ ಮಾಡಬೇಕು ಎಂಬ ಬೇಡಿಕೆಯನ್ನು ಈ ಹಿಂದೆಯೇ ಕೇಂದ್ರದ ಮುಂದಿಡಲಾಗಿದೆ. ಈ ಬಗ್ಗೆ ಪ್ರಧಾನಿಗೂ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications