ಬಿಬಿಎಂಪಿ ಚುನಾವಣೆ ಮುಂದಕ್ಕೆ: ವಿಜಯ್ ಕುಮಾರ್
ಬೆಂಗಳೂರು,ಜೂ. 28 : ಬಿಬಿಎಂಪಿಗೆ ಸೆಪ್ಟೆಂಬರ್ನಲ್ಲಿ ಚುನಾವಣೆ ನಡೆಸುವುದು ಸಾಧ್ಯವಾಗಲಾರದು ಎಂದು ಶಾಸಕ ಬಿ.ಎನ್.ವಿಜಯ ಕುಮಾರ್ ಹೇಳಿದ್ದಾರೆ.
ನೂತನ ಲೋಕಸಭೆ ಸದಸ್ಯರಿಗೆ ಕರ್ನಾಟಕ ವಕೀಲರ ಒಕ್ಕೂಟ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾಲಿಕೆಗೆ ಸೆಪ್ಟೆಂಬರ್ ವೊಳಗೆ ಚುನಾವಣೆ ನಡೆಸಲು ಸಾಧ್ಯ ವಾಗಲಾರದು.ಮುಂದೂಡುವ ಸಂದರ್ಭ ಬರಬಹುದು ಎಂದು ಹೇಳಿದರು.
ಪಾಲಿಕೆಗೆ ಅವಿದ್ಯಾವಂತರು ಆರಿಸಿ ಬರುತ್ತಿದ್ದಾರೆ. ಎರಡು,ಮೂರನೇ ತರಗತಿ ಓದಿದವರು ಆರಿಸಿ ಬಂದು, ಮೋರಿ,ರಸ್ತೆ ಹಾಗೂ ವಿದ್ಯುತ್ ದೀಪ ಒತ್ತುವರಿ ಆಗಿದೆ ಎಂದು ಕೂಗಾಡುತ್ತಾರೆ. ಅಭಿವೃದ್ಧಿ ಬಗ್ಗೆ ಚಿಂತಿಸಲಾರರು. ವಿದ್ಯಾವಂತರು ಆರಿಸಿ ಬಂದರೆ,ಪಾಲಿಕೆ ಅಭಿವೃದ್ಧಿಯೆಡೆಗೆ ನಡೆಯಲಿದೆ ಎಂದರು. ಪಾಲಿಕೆ ಚುನಾವಣೆ, ವಿಧಾನಸಭೆ/ಲೋಕಸಭೆ ಚುನಾವಣೆಯಂತಲ್ಲ.ಇಲ್ಲಿ ಪಕ್ಷ ,ಪ್ರಣಾಳಿಕೆಗಿಂತವ್ಯಕ್ತಿ ಮುಖ್ಯವಾಗುತ್ತಾನೆ. ಈ ಬಾರಿ ಪಕ್ಷದ ವತಿಯಿಂದ 10 ರಿಂದ 15 ವಕೀಲರನ್ನು ಕಣಕ್ಕಿಳಿಸಲಾಗುವುದು ಎಂದು ಹೇಳಿದರು.
ಚುನಾವಣೆ ಮುಂದಕ್ಕೆ ಹೋಗಬಹುದು ಎಂದು ಶಾಸಕರ ಮಾತನ್ನು ಪುಷ್ಟೀಕರಿಸಿದ ಸಂಸದ ಡಿ.ಬಿ.ಚಂದ್ರೇಗೌಡ, ಆಕ್ಷೇಪಣೆ ಸಲ್ಲಿಸಲು ಹದಿನೈದು ಮತ್ತು ವಾರ್ಡ್ ಮೀಸಲಿಗೆ
ಹದಿನೈದು ದಿನ ಬೇಕಾಗಲಿದೆ. ಚುನಾವಣೆಗೆ ಮೂವತ್ತು ದಿನ ಮೊದಲು ಘೋಷಣೆ ಹೊರಬೀಳಬೇಕು. ನಂತರವೇ ಅಧಿಸೂಚನೆ. ಹೀಗಾಗಿ, ಸೆಪ್ಟೆಂಬರ್ ಒಳಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದರು.
ಪ್ರತಿಪಕ್ಷ ನಾಯಕರು ಅಧಿಕಾರಿಗಳ ಸಭೆ ನಡೆಸುವುದನ್ನು ಸರಕಾರ ಸಹಿಸಬಾರದು.ಅವರಿಗೆ ಆ ಅಧಿಕಾರವಿಲ್ಲ. ಎರಡೂ ಸದನದ ಪ್ರತಿ ಪಕ್ಷ ನಾಯಕರಾಗಿರುವ ಅನುಭವ ತಮಗಿದೆ.
ಕ್ಯಾಬಿನೆಟ್ ದರ್ಜೆ ಇದ್ದರೂ, ಸಂಬಳ ಸೌಲಭ್ಯ ವಿಧಾನಸಭೆ ಅಧ್ಯಕ್ಷರ ವ್ಯಾಪ್ತಿಗೆ ಬರುತ್ತದೆ. ಪ್ರತಿಪಕ್ಷದ ನಾಯಕರು ಸರಕಾರದ ಭಾಗ ಅಲ್ಲ ಎಂದರು. ಸಂಸದ ಪಿ.ಸಿ.ಮೋಹನ್, ಒಕ್ಕೂಟದ ಕೆ.ಎನ್. ಸುಬ್ಬಾರೆಡ್ಡಿ, ರಾಮಮೂರ್ತಿ, ಭಕ್ತವತ್ಸಲ ಮತ್ತಿತರರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications