ಗಣಿ ಧಣಿಗಳಿಂದ ತಿಮ್ಮಪ್ಪನಿಗೆ ವಜ್ರ ಖಚಿತ ಕಿರೀಟ
ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಶಾಸಕ ಟಿ ಎಚ್ ಸುರೇಶ್ ಬಾಬು ಮತ್ತು ಅವರ ಕುಟುಂಬ ವರ್ಗದವರು ಗುರುವಾರ ತಿಮ್ಮಪ್ಪನ ಸನ್ನಿಧಿಯಲ್ಲಿ ಹಾಜರಿದ್ದರು. ಪಲ್ಲಕ್ಕಿಯಲ್ಲಿ ವಜ್ರ ಖಚಿತ ಕಿರೀಟವನ್ನು ಹೊತ್ತು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ತಮ್ಮ ಒಂದು ವರ್ಷದ ಹಿಂದಿನ ಹರಕೆಯನ್ನು ತೀರಿಸಿಕೊಂಡರು.
ಈ ವಜ್ರ ಖಚಿತ ಕಿರೀಟವನ್ನು ಕೊಯಮತ್ತೂರಿನ ಕೀರ್ತಿಲಾಲ್ ಸಂಸ್ಥೆ ತಯಾರಿಸಿದೆ. ರಾಜಕೀಯ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ತಿಮ್ಮಪ್ಪನ ದಯೆಯಿದೆ ಎಂಬುದು ಗಣಿ ಧಣಿಗಳ ಅಚಲ ನಂಚಿಕೆ. ವರ್ಷದ ಹಿಂದೆಯೇ ವಜ್ರ ಖಚಿತ ಕಿರೀಟರನ್ನು ಅರ್ಪಿಸುವುದಾಗಿ ಹರಕೆ ಹೊತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ನಿರ್ಮಿಸುತ್ತಿರುವ ಬ್ರಹ್ಮಿಣಿ ಸ್ಟೀಲ್ ಕೈಗಾರಿಕೆಗೆ ಯಶಸ್ಸು ದೊರೆಯಲಿ ಎಂಬ ಉದ್ದೇಶದಿಂದ ತಿಮ್ಮಪ್ಪನಿಗೆ ಈ ವಜ್ರ ಖಚಿತ ಕಿರೀಟ ಸಮರ್ಪಿಸಿದ್ದಾಗಿ ಶಾಸಕ ಜಿ ಸೋಮಶೇಖರ ರೆಡ್ಡಿ ಬೆಂಗಳೂರಿನಲ್ಲಿ ಗುರುವಾರ ತಿಳಿಸಿದರು. ತಿಮ್ಮಪ್ಪನ ಬಳಿ ಹಾಲಿ 7 ಕಿರೀಟಗಳಿದ್ದು ಗಣಿ ಧಣಿಗಳು ಅರ್ಪಿಸುತ್ತಿರುವುದು 8ನೆಯ ಕಿರೀಟ ಇದಾಗಿದೆ.
(ಏಜೆನ್ಸೀಸ್)