ಗೋಧಿ ಹಿಟ್ಟು ಪೂರೈಸಲು ಕೇಂದ್ರಕ್ಕೆ ಮನವಿ
ಬೆಂಗಳೂರು, ಜೂ. 9 : ಗುಜರಾತ್ ರಾಜ್ಯದ ಮಾದರಿಯಂತೆ ಪೌಷ್ಠಿಕಾಂಶಯುಳ್ಳ ಗೋಧಿ, ಹಿಟ್ಟನ್ನು ರಾಜ್ಯದಲ್ಲಿ ಪೂರೈಕೆ ಮಾಡುವ ಸಂಬಂಧ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಹರತಾಳು ಹಾಲಪ್ಪ ಇಂದಿಲ್ಲಿ ತಿಳಿಸಿದರು.
ವಿಧಾನಸೌಧದಲ್ಲಿ ಗುಜರಾತ್ ರಾಜ್ಯದ ಆಹಾರ ಮತ್ತು ಪೂರೈಕೆ ಸಚಿವ ನರವತ್ಬಾಯಿ ಪಟೇಲ್ ಜೊತೆ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗುಜರಾತಿನಲ್ಲಿ ನಮ್ಮ ರಾಜ್ಯಕ್ಕಿಂತ ಸೀಮೆ ಎಣ್ಣೆ ಪೂರೈಕೆ ಜಾಸ್ತಿ ಇದ್ದು ರಾಜ್ಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಸೀಮೆ ಎಣ್ಣೆ ಪೂರೈಕೆ ಮಾಡುವ ಕುರಿತಂತೆ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು ಎಂದು ತಿಳಿಸಿದರು.
ಇದೇ ತಿಂಗಳು ಗುಜರಾಜ್ ರಾಜ್ಯಕ್ಕೆ ನಮ್ಮ ಅಧಿಕಾರಿಗಳು ಭೇಟಿ ನೀಡುತ್ತಿದ್ದು, ಪೌಷ್ಠಿಕಾಂಶದ ಗೋಧಿ ಹಿಟ್ಟು ಪೂರೈಕೆ ಕುರಿತಂತೆ ಅಧ್ಯಯನ ನಡೆಸಲಿದ್ದಾರೆ ಎಂದು ಹೇಳಿದರು. ಗುಜರಾತ್ ಹಾಗೂ ಕರ್ನಾಟಕ ರಾಜ್ಯದಲ್ಲಿ ಜನಸಂಖ್ಯೆ ಪ್ರಮಾಣ 5.50 ಕೋಟಿ ಇದ್ದು, ಕೇಂದ್ರ ಸರ್ಕಾರ ನಿಗದಿಪಡಿಸಿದಂತೆ ಗುಜರಾತ್ ರಾಜ್ಯದಲ್ಲಿ ಕೇವಲ 35 ಲಕ್ಷ ಪಡಿತರ ಚೀಟಿ ವಿತರಿಸಲಾಗಿದೆ, ಆದರೆ ರಾಜ್ಯದಲ್ಲಿ 1.06 ಕೋಟಿ ಚೀಟಿ ವಿತರಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನರವತ್ಬಾಯಿ ಪಟೇಲ್ ಕರ್ನಾಟಕದಲ್ಲಿ ಪಡಿತರ ಗುರುತಿನ ಚೀಟಿ ಹಂಚಿಕೆಗೆ ಬಯೋಮೆಟ್ರಿಕ್ಸ್ ವ್ಯವಸ್ಥೆಯನ್ನು ಅಳವಡಿಸುತ್ತಿದ್ದಾರೆ. ಇದು ನಮ್ಮ ರಾಜ್ಯದಲ್ಲೂ ಅಳವಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಇದರಿಂದ ಪಡಿತರ ಚೀಟಿಯಲ್ಲಿನ ಅಕ್ರಮವನ್ನು ತಡೆಹಿಡಿಯಬಹುದಾಗಿದೆ ಎಂದು ಸಚಿವರು ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)