ಮೈಸೂರು ಉಸ್ತುವಾರಿ ಒಲ್ಲೆ ಎಂದ ಶೋಭಾ
ಬಿಜೆಪಿ ಸರಕಾರ ಬಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರು ವಿಭಾಗ ಮಟ್ಟದ ವಿಕಾಸ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶೋಭಾ ಕರಂದ್ಲಾಜೆ, ತಮ್ಮ ಇಲಾಖೆ ಜವಾಬ್ದಾರಿ ನೋಡಿಕೊಂಡು ಜಿಲ್ಲಾ ಉಸ್ತುವಾರಿ ಕೆಲಸ ನಿರ್ವಹಿಸುವುದು ಕಷ್ಟದ ಕೆಲಸವಾಗಿದೆ. ಮುಂದಿನ ದಸರಾ, ನವೆಂಬರ್ ನಲ್ಲಿ ತಲಕಾಡು ಉತ್ಸವ ನಡೆಯಲಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆ ಸಮುದ್ರ ಇದ್ದಂತೆ. ಈ ಎರಡು ಜವಾಬ್ದಾರಿಯನ್ನು ನೋಡಿಕೊಳ್ಳುವುದು ಸಮಸ್ಯೆಯಾಗಲಿದೆ. ಆದ್ದರಿಂದ ಜಿಲ್ಲಾ ಉಸ್ತುವಾರಿಯನ್ನು ಬದಲಿಸುವಂತೆ ಸಿಎಂ ಅವರಿಗೆ ಮನವಿ ಮಾಡಿಕೊಂಡರು.
ಆದರೆ, ಶೋಭಾ ಅವರ ಮನವಿಗೆ ಶಾಸಕ ರಾಮದಾಸ್ ಬಲವಾಗಿ ವಿರೋಧಿಸಿದರು. ಶೋಭಾ ಅವರು ಉಸ್ತುವಾರಿ ವಹಿಸಿಕೊಂಡ ನಂತರ ಮೈಸೂರು ಜಿಲ್ಲೆಯಾದ್ಯಂತ ಅನೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಆದ್ದರಿಂದ ಅವರನ್ನೇ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮುಂದುವರೆಸಬೇಕು ಎಂದು ರಾಮದಾಸ್ ಮನವಿ ಮಾಡಿಕೊಂಡರು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ಶೋಭಾ ಅವರ ಮನವಿಯನ್ನು ತಿರಸ್ಕರಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)