ತಮಿಳು ಹೆಸರಿಡಿ; ಚಿನ್ನದುಂಗುರ ಪಡೆಯಿರಿ

ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ 86ನೇ ಹುಟ್ಟುಹಬ್ಬದ ದಿನವಾದ ಇಂದು ಚೆನ್ನೈ ಮಹಾನಗರಪಾಲಿಕೆ ಹೊಸದೊಂದು ಸ್ಕೀಮ್ ಘೋಷಿಸಿದೆ. ಅದೇನಂದರೆ ಸರಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ 'ತಮಿಳು' ಹೆಸರು ನಾಮಕರಣ ಮಾಡಿದರೆ ಒಂದು ಗ್ರಾಂ ಚಿನ್ನದ ಉಂಗುರ ಫ್ರೀ. ಚೆನ್ನೈ ಮೇಯರ್ ಹೇಳುವ ಪ್ರಕಾರ ಕಳೆದ 70 ವರ್ಷಗಳಿಂದ ಕರುಣಾನಿಧಿಯವರು ತಮಿಳು ಭಾಷೆಯ ಏಳಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ. ಇದಕ್ಕಾಗಿ ಅವರ ಹುಟ್ಟುಹಬ್ಬದ ದಿನವಾದ ಇಂದು ಅವರಿಗೆ ಗೌರವಿಸಲು ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಮೇಯರ್ ಸುಬ್ರಮಣ್ಯಮ್ ಹೇಳಿದ್ದಾರೆ.
ಸರಕಾರಿ ಆಸ್ಪತ್ರೆಯಲ್ಲಿ ಜನಿಸಿದ ಮಗುವಿನ ಜನನ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ನೀಡಿದರೆ ಅರ್ಜಿ ಸಲ್ಲಿಸಿದ 15 ದಿನದೊಳಗೆ ಮನೆ ಬಾಗಿಲಿಗೆ ಉಂಗುರ ಕಳುಹಿಸುವ ವ್ಯವಸ್ಥೆ ಮಾಡಿದ್ದೇವೆ ಎಂದು ಮೇಯರ್ ತಿಳಿಸಿದ್ದಾರೆ. ಈಗಾಗಲೇ ಅಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಜನಿಸುವ ಮಕ್ಕಳಿಗೆ ಸೋಪು, ಬಟ್ಟೆ ಮತ್ತು ಪೌಡರ್ ಉಚಿತವಾಗಿ ನೀಡಲಾಗುತ್ತಿದೆ.
ಸರಕಾರದ ದುಡ್ದೆಂದರೆ ಸಾರ್ವಜನಿಕರಿಂದ ಸಂಗ್ರಹಿಸಿದ ತೆರಿಗೆ ಹಣ ತಾನೇ, ಸೋಪು ಬಟ್ಟೆ ಓಕೆ ಉಂಗುರ ಯಾಕೆ? ಎಂದು ವಿರೋಧ ಪಕ್ಷದವರು ಕೇಳಿದರೂ ಕೇಳಬಹುದು. ಒಟ್ಟಿನಲ್ಲಿ ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ. ಅದಿರಲಿ ಅಷ್ಟು ಭಾಷಾಭಿಮಾನ ಇರುವ ಕರುಣಾನಿಧಿ ತನ್ನ ಪುತ್ರ ತಮಿಳುನಾಡು ಉಪ ಮುಖ್ಯಮಂತ್ರಿಯಾದ ಸ್ಟ್ಯಾಲಿನ್ ಅವರ ಹೆಸರನ್ನು 'ಸ್ಟ್ಯಾಲಿನ್' ಎಂದು ಯಾಕೆ ಆಂಗ್ಲ ಭಾಷೆಯ ಹೆಸರನ್ನು ನಾಮಕರಣ ಮಾಡಿದರು ಎಂಬುದು ಬಿಲಿಯನ್ ಡಾಲರ್ ಪ್ರಶ್ನೆ!
(ಏಜೆನ್ಸೀಸ್)












Click it and Unblock the Notifications