ನಗರದ ಪ್ರತಿಷ್ಠಿತ ಮುತ್ತೂಟ್ ಫೈನಾನ್ಸ್ ಲೂಟಿ
ಬೆಂಗಳೂರು, ಜೂ.3: ದಕ್ಷಿಣ ಭಾರತದ ಪ್ರತಿಷ್ಠಿತ ಫೈನಾನ್ಸ್ ಕಂಪೆನಿ ಮುತ್ತೂಟ್ ಫೈನಾನ್ಸ್ ಮಳಿಗೆಯಲ್ಲಿ ಕಳೆದ ರಾತ್ರಿ ಕೋಟ್ಯಂತರ ರು ಮೌಲ್ಯದ ಹಣ ಹಾಗೂ ಆಭರಣ ದೋಚಿರುವ ಘಟನೆ ಜೀವನ್ ಭೀಮಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗ್ರಾಹಕರಿಗೆ ಹಣ ನೀಡುವುದು, ಗಿರವಿ ಇಟ್ಟುಕೊಳ್ಳುವುದು ಮುತ್ತೂಟ್ ಫೈನಾನ್ಸ್ ನ ಕೆಲಸವಾಗಿದೆ.
ಹೊಸ ತಿಪ್ಪಸಂದ್ರದಲ್ಲಿರುವ ಈ ಮಳಿಗೆಯ ವ್ಯವಸ್ಥಾಪಕರು ಕಳೆದ ರಾತ್ರಿ, ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳು ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾರೆ. ಚಿಕಿತ್ಸೆ ಕೊಡಿಸುವ ನೆಪದಲ್ಲಿ ಅವರನ್ನು ತಮ್ಮೊಂದಿಗೆ ಕರೆದೊಯ್ದು ಕೀ ಕಿತ್ತುಕೊಂಡು , ಫೈನಾನ್ಸ್ ಕಚೇರಿಗೆ ಬಂದು ಹಣ, ಆಭರಣವನ್ನು ಲೂಟಿ ಮಾಡಿದ್ದಾರೆ. ಇಂದು ಬೆಳಗ್ಗೆ ಪೊಲೀಸರು ಶ್ವಾನದಳದೊಂದಿಗೆ ಬಂದು, ತಪಾಸಣೆ ಮಾಡಿದ್ದಾರೆ. ಕಳುವಾದ ವಸ್ತುಗಳ ಮೌಲ್ಯದ ಅಂದಾಜು ಕಾರ್ಯ ನಡೆಯುತ್ತಿದ್ದು, ಕೋಟಿಗೂ ಮೀರಿದ ಹಣ, ಅಭರಣ ದೋಚಲಾಗಿದೆ ಎಂದು ತಿಳಿದು ಬಂದಿದೆ.
ಇದೊಂದು ಯೋಜಿತ ಕಾರ್ಯವಾಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈಗಾಗಲೇ ಫೈನಾನ್ಸ್ ಕಂಪೆನಿ ಮಾಲೀಕರನ್ನು ಮತ್ತು ಸಿಬ್ಬಂದಿಯನ್ನು ವಿಚಾರಣೆ ಮಾಡಲಾಗಿದೆ. ಪ್ರಕರಣದ ತನಿಖೆಗೆ ತಂಡವನ್ನು ರಚಿಸಲಾಗಿದೆ. ಹೆಣ್ಣೂರು ಕ್ರಾಸ್ ನ ಚೆಮ್ಮನೂರು ಜ್ಯುವೆಲರ್ಸ್ ನಲ್ಲಿ ಹಾಡುಹಗಲೇ ಗ್ರಾಹಕರ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಬಂದೂಕಿನಿಂದ ಹೆದರಿಸಿ ಆಭರಣ ದೋಚಿದ್ದರು. ಈಗ ಮುತ್ತೂಟ್ ಫೈನಾನ್ಸ್ ಕಂಪೆನಿ ಲೂಟಿ ಮಾಡಲಾಗಿದೆ. ಎರಡಕ್ಕೂ ಸಂಬಂಧವಿರುವ ಬಗ್ಗೆ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡವಾರ್ತೆ)