ಕರುಣಾನಿಧಿ ವಿರುದ್ಧ ಮೊಕದ್ದಮೆ ರದ್ದು
ಬೆಂಗಳೂರು, ಜೂ.2: ಎರಡು ವರ್ಷಗಳ ಹಿಂದೆ ರಾಮಸೇತುವೆ ವಿಚಾರದಲ್ಲಿ, ರಾಮ ಯಾರು? ರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದಾನೆ? ರಾಮಸೇತುವೆಯನ್ನು ರಾಮನೇ ನಿರ್ಮಿಸಿದ್ದಾನೆ ಎನ್ನುವುದಕ್ಕೆ ಪುರಾವೆ ಏನು? ಎಂದು ಹೇಳಿಕೆ ನೀಡಿದ್ದ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ವಿರುದ್ಧ ನಗರದ ಮೂರನೇ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾಗಿದ್ದ ಮೊಕದ್ದಮೆಯನ್ನು ಹೈಕೋರ್ಟ್ ಸೋಮವಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಕರುಣಾನಿಧಿ ಹಿಂದೂ ಧರ್ಮಕ್ಕೆ ನಿಂದನೆ ಮಾಡಿದ್ದಾರೆಂದು ರಾಜಶೇಖರನ್ ಹಾಗೂ ಇತರರು ಅವರ ವಿರುದ್ಧ ದಾವೆ ಹೂಡಿದ್ದರು. ಭಾರತ ಮತ್ತು ಶ್ರೀಲಂಕಾ ನಡುವೆ ನಿರ್ಮಾಣಗೊಳ್ಳಬೇಕಿದ್ದ ಬಹುಕೋಟಿ ಜಲಮಾರ್ಗದ ವಿವಾದದ ಸಂದರ್ಭದಲ್ಲಿ ಕರುಣಾನಿಧಿ ಈ ರೀತಿಯ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ರಾಜ್ಯದ ಅಡ್ವೋಕೇಟ ಜನರಲ್ ಉದಯ್ ಹೊಳ್ಳ ಇಂದು ಕೋರ್ಟ್ ಗೆ ಹಾಜರಾಗಿ ಕರುಣಾನಿಧಿ ವಿರುದ್ಧ ಇರುವ ಕೇಸನ್ನು ರದ್ದು ಗೊಳಿಸುವಂತೆ ಕೋರ್ಟ್ ಗೆ ವಿನಂತಿಸಿದರು. ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಕೇಸನ್ನು ರದ್ದು ಮಾಡಿ ಈ ವಿಚಾರದಲ್ಲಿ ಕರುಣಾನಿಧಿ ವಿರುದ್ಧ ಯಾವುದೇ ವಿಚಾರಣೆಯ ಅಗತ್ಯವಿಲ್ಲ ಎಂದು ಆದೇಶ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications