ಬಿಎಸ್ ವೈ ವಿರುದ್ಧ ಖರ್ಗೆ ಕೆಂಡಾಮಂಡಲ
ಬೆಂಗಳೂರು, ಜೂ.1: ಕೇಂದ್ರ ಸರಕಾರ ಮಲತಾಯಿ ಧೋರಣೆ ತಾಳುತ್ತಿದೆ ಎನ್ನುವ ಮನೋಧೋರಣೆಯನ್ನು ಬಿಟ್ಟು ಮುಖ್ಯಮಂತ್ರಿ ಯಡಿಯೂರಪ್ಪ ಸಹಕಾರ ಮನೋಭಾವ ಬೆಳೆಸಿಕೊಳ್ಳಲಿ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
ಕೇಂದ್ರ ಸಚಿವಾರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲಬಾರಿಗೆ ರಾಜ್ಯಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಕೇಂದ್ರ ಸರಕಾರ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳುತ್ತಿದೆ ಎಂದು ಮುಖ್ಯಮಂತ್ರಿ ಆರೋಪಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಪ್ರತಿದಿನ ಸಾಯೋರಿಗೆ ಅಳೋರು ಯಾರು ಎನ್ನುವ ಮನಸ್ಥಿತಿ ಬೆಳೆಯಬಹುದು. ಇನ್ನು ಮುಂದಾದರೂ ತಮ್ಮ ನಿಲುವನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಗಮನ ಕೊಡಲಿ ಎಂದು ಖರ್ಗೆ ಸಲಹೆ ನೀಡಿದರು.
ಯುಪಿಎ ಸರಕಾರ ಸಣ್ಣ, ಮಧ್ಯಮ ಮತ್ತು ಬೃಹತ್ ನಗರಗಳಿಗೂ ಹಣ ಬಿಡುಗಡೆ ಮಾಡಿದೆ. ಈ ಹಣ ಶಿಕಾರಿಪುರ ಮತ್ತು ರಾಮನಗರಕ್ಕೂ ಹೋಗಿದೆ. ಸುಮ್ಮನೆ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪ ಮಾಡುವುದರಲ್ಲಿ ಅರ್ಥವಿಲ್ಲ.
ಈ ಮಧ್ಯೆ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ವೀರಪ್ಪ ಮೊಯ್ಲಿ ಅವರ ಆರ್ ಟಿ ನಗರದ ನಿವಾಸದಲ್ಲಿ ಮತ್ತು ಸದಾಶಿವನಗರದ ಖರ್ಗೆಯವರ ನಿವಾಸಕ್ಕೆ ತೆರಳಿ ಸರಕಾರದ ಪರವಾಗಿ ಅಭಿನಂದನೆ ಸಲ್ಲಿಸಿದರು.
(ದಟ್ಸ್ ಕನ್ನಡ ವಾರ್ತೆ)