ಆಟೋಗೆ ಡಿಕ್ಕಿ ಹೊಡೆದ ಡಿಸೈರ್ ಕಾರಿಗೆ ಕಲ್ಲೇಟು
ಮಲ್ಲಿಕಾರ್ಜುನ ನರ್ಸಿಂಗ್ ಹೋಂನ ಡಾ|.ಶ್ರೀನಾಥ್ರವರ ಮಗ ಹಾಗೂ ಆತನ ಸ್ನೇಹಿತನಿದ್ದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು (ಕೆಎ13,ಎಂ6864) ಜ್ಯೂಯಲ್ ರಾಕ್ ರಸ್ತೆಯಿಂದ ಎಲ್.ಎಲ್.ಆರ್.ರಸ್ತೆ ಕಡೆಗೆ ಅತಿವೇಗವಾಗಿ ಬಂದು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ಇದರಿಂದ ಆಟೋರಿಕ್ಷಾದಲ್ಲಿ ಪ್ರಯಾಣ ಮಾಡುತ್ತಿದ್ದ, ಮೈಸೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಅಭಿಷೇಕ್ಗೆ ಭುಜ ಸೇರಿದಂತೆ ಹಲವೆಡೆ ತೀವ್ರ ಗಾಯಗಳಾಗಿವೆ.
ಅಪಘಾತ ಸಂಭವಿಸಿದ ಕೂಡಲೇ ಸುತ್ತಮುತ್ತಲಿನ ಜನರೆಲ್ಲಾ ಒಗ್ಗೂಡಿ, ಕಾರಿನಿಂದ ಡಾ| ಶ್ರೀನಾಥ್ರವರ ಮಗ ಮತ್ತು ಆತನ ಸ್ನೇಹಿತನನ್ನು ಹೊರಕ್ಕೆಳೆದು ಕಾರನ್ನು ಸೈಜುಗಲ್ಲುಗಳಿಂದ ಪುಡಿಪುಡಿ ಮಾಡಿದರು. ಅಲ್ಲಿಗೆ ಆಗಮಿಸಿದ ಟ್ರಾಫಿಕ್ ಪೊಲೀಸರು ಕಾರನ್ನು ಘಟನೆಯ ಸ್ಥಳದಿಂದ ಬೇರೆ ಕಡೆಗೆ ಒಯ್ಯಲು ಪ್ರಯತ್ನಿಸಿದಾಗ ಒಗ್ಗೂಡಿದ್ದ ಗುಂಪು ಪೊಲೀಸರ ಕ್ರಮವನ್ನು ವಿರೋಧಿಸಿತು. ಆಗ ಪೊಲೀಸರಿಗೂ ಹಾಗೂ ಸ್ಥಳದಲ್ಲಿದ್ದ ಹಲವರ ನಡುವೆ ಮಾತಿನ ಚಕಮಕಿ ನಡೆದು ಹೊಡೆದಾಟದ ಮಟ್ಟಕ್ಕೆ ಹೋಯಿತು. ಈ ಘಟನೆಯಲ್ಲಿ ಹೊಯ್ಸಳ ವಾಹನದ ಚಾಲಕ ಸತ್ಯನಾರಾಯಣ್, ಟ್ರಾಫಿಕ್ ಪೊಲೀಸ್ ಠಾಣೆಯ ಸಹಾಯಕ ಸಬ್ಇನ್ಸ್ಪೆಕ್ಟರ್ ವಾಸು ಸೇರಿದಂತೆ ಕೆಲವರಿಗೆ ಹೊಡೆತ ಬಿದ್ದವು. ಇದರಿಂದ ಕೋಪಗೊಂಡ ಪೊಲೀಸರು ಸಹ ಲಾಠಿ ಚಾರ್ಜ್ ಮಾಡಿದರು. ಎ.ಎಸೈ. ವಾಸುರವರ ಲಾಠಿಯ ಏಟಿನಿಂದ ನಾಮನಿರ್ದೇಶಿತ ನಗರಸಭಾ ಸದಸ್ಯ ಶಿವಣ್ಣರಿಗೆ ತೀವ್ರತರದ ಗಾಯಗಳಾಗಿವೆ. ಶಿವಣ್ಣನನ್ನು ನಂಜಪ್ಪ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೊಳಪಡಿಸಲಾಗಿದೆ.
ಗಾಯಗೊಂಡಿರುವ ಅಭಿಷೇಕ್ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೌನ್ಸಿಲರ್ ಶಿವಣ್ಣ ಸಹ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.