ರಾಜೀವ್ ಗಾಂಧಿ ಮಾನವ ಸೇವಾ ರಾಷ್ಟ್ರ ಪ್ರಶಸ್ತಿ
ಬೆಂಗಳೂರು, ಮೇ.22: ಭಾರತ ಸರ್ಕಾರವು ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಮಕ್ಕಳ ಅಭಿವೃದ್ಧಿ , ಮಕ್ಕಳ ರಕ್ಷಣೆ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ 10 ವರ್ಷಕ್ಕಿಂತ ಹೆಚ್ಚಿನ ಉತ್ತಮ ಸೇವೆಯನ್ನು ಸಲ್ಲಿಸಿರುವಂತಹ ವ್ಯಕ್ತಿಗಳನ್ನು ಗುರುತಿಸಿ ರಾಜೀವ್ ಗಾಂಧಿ ಮಾನವ ಸೇವಾ ಪ್ರಶಸ್ತಿಯನ್ನು ಪ್ರತಿ ವರ್ಷ 3 ವ್ಯಕ್ತಿಗಳಿಗೆ ನೀಡಿ ಗೌರವಿಸಲಾಗುತ್ತದೆ.
ಪ್ರತಿ ವರ್ಷ ರಾಜೀವ್ ಗಾಂಧಿಯವರ ಜನ್ಮ ದಿನವಾದ ಆಗಸ್ಟ್ 20 ರಂದು ಈ ಪ್ರಶಸ್ತಿಯನ್ನು ಆಯ್ಕೆಯಾದ ವ್ಯಕ್ತಿಗಳ ಹೆಸರನ್ನು ಘೋಷಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರತಿ ಪ್ರಶಸ್ತಿಯು ರು.1 ಲಕ್ಷಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ.
ಇದಲದೆ ಭಾರತ ಸರ್ಕಾರವು ಮಕ್ಕಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ, ಉತ್ತಮ ಸೇವೆಯನ್ನು ಸಲ್ಲಿಸಿರುವಂತಹ ಸಮಾಜ ಸೇವಕರ ಸೇವೆಯನ್ನು ಗುರುತಿಸಿ ವೈಯಕ್ತಿಕ ಪ್ರಶಸ್ತಿಗಳನ್ನು 3 ವ್ಯಕ್ತಿಗಳಿಗೆ ಹಾಗೂ 5 ಸ್ವಯಂಸೇವಾ ಸಂಸ್ಥೆಗಳಿಗೆ ಪ್ರಶಸ್ತಿ ನೀಡುತ್ತದೆ.
ವೈಯಕ್ತಿಕ ಪ್ರಶಸ್ತಿಯು ರು.1 ಲಕ್ಷ ನಗದು ಬಹುಮಾನ ಹಾಗೂ ಸಂಘ ಸಂಸ್ಥೆಗಳ ಪ್ರಶಸ್ತಿಯು ತಲಾ ರು.3 ಲಕ್ಷಗಳ ನಗದು ಬಹುಮಾನ ಹಾಗೂ ಪ್ರಶಸ್ತಿ, ಪತ್ರವನ್ನು ಒಳಗೊಂಡಿರುತ್ತದೆ. ಆಯ್ಕೆಯಾದ ವ್ಯಕ್ತಿ ಹಾಗೂ ಸಂಘ ಸಂಸ್ಥೆಗಳ ಹೆಸರನ್ನು ಘೋಷಿಸಿ ಮಕ್ಕಳ ದಿನಾಚರಣೆಯೆಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕರ್ನಾಟಕ ಸರ್ಕಾರವೂ ಸಹ ಮಕ್ಕಳ ಕಲ್ಯಾಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದಂತಹ 2 ವ್ಯಕ್ತಿಗಳಿಗೆ ತಲಾ ರೂ 25,000 ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಹಾಗೂ 2 ಸ್ವಯಂ ಸಂಸ್ಥೆಗಳಿಗೆ ತಲಾ ರು.1 ಲಕ್ಷ ಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ಮಕ್ಕಳ ದಿನಾಚರಣೆ ದಿನದಂದು ಪ್ರದಾನ ಮಾಡಿ ಗೌರವಿಸುತ್ತದೆ.
ರಾಜ್ಯ ಸರ್ಕಾರದಿಂದ ರಚಿಸಲ್ಪಟ್ಟಿರುವ ಸಮಿತಿಯು ಮೇಲೆ ತಿಳಿಸಿರುವ ಎಲ್ಲಾ ಪ್ರಶಸ್ತಿಗಳಿಗೆ ಸ್ವೀಕೃತವಾದ ಅರ್ಜಿಗಳನ್ನು ಪರಿಶೀಲಿಸಿ, ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯಕ್ತಿ ಹಾಗೂ ಸಂಘ ಸಂಸ್ಥೆಗಳನ್ನು ಆಯ್ಕೆಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ರಾಷ್ಟ್ರ ಪ್ರಶಸ್ತಿಗಾಗಿ ಸಮಿತಿಯು ಆಯ್ಕೆ ಮಾಡಿದಂತಹ ಸಂಸ್ಥೆಗಳ ಹಾಗೂ ವ್ಯಕ್ತಿಗಳ ಪೈಕಿ ಇಬ್ಬರು ವ್ಯಕ್ತಿಗಳಿಗೆ ಹಾಗೂ ಎರಡು ಸಂಸ್ಥೆಗಳೀಗೆ ನವೆಂಬರ್ 14 ರಂದು ಏರ್ಪಡಿಸಲಾಗುವ ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
2009ನೇ ವರ್ಷದ ಪ್ರಶಸ್ತಿಗಾಗಿ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಯಾ ಜಿಲ್ಲಾ ಕಚೇರಿಗಳಿಂದ ಪಡೆದು ಆಂಗ್ಲ ಭಾಷೆಯಲ್ಲಿ ತ್ರಿಪ್ರತಿಯಲ್ಲಿ ಭರ್ತಿಮಾಡಿದ ಅರ್ಜಿಗಳನ್ನು ಸಂಬಂಧಪಟ್ಟ ಜಿಲ್ಲಾ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರಿಗೆ ದಿನಾಂಕ 30.5.2009 ರ ಒಳಗೆ ಪ್ರಧಾನ ಕಚೇರಿಗೆ ತಲುಪುವಂತೆ ಕಳುಹಿಸಲು ಕೋರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)