ಸರಕಾರದ ಬೇರುಗಳು ಸುಭದ್ರ, ಯಡಿಯೂರಪ್ಪ
ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಇಂತಹ ಪ್ರಯತ್ನ ಮಾಡಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಹೀನಾಯವಾಗಿ ಸೋತಿವೆ ಎಂದರು. ಜನಾದೇಶ ಬಿಜೆಪಿ ಪರವಾಗಿದೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಪ್ರತಿಪಕ್ಷಗಳು ಸರಕಾರಕ್ಕೆ ಸೂಕ್ತ ಬೆಂಬಲ ಹಾಗೂ ಸಹಕಾರ ನೀಡಬೇಕು ಎಂದು ಯಡಿಯೂರಪ್ಪ ಮನವಿ ಮಾಡಿಕೊಂಡರು.
ಈ ಹಿಂದೆ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಕೇಂದ್ರ ಸರಕಾರದ ಮಲತಾಯಿ ಧೋರಣೆಯಿಂದ ರಾಜ್ಯದ ಅನೇಕ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಇನ್ನಾದರೂ ಮಲತಾಯಿ ಧೋರಣೆ ಅನುಸರಿಸದೆ ದೇಶದ ಏಕತೆಗೆ ಅನುಗುಣವಾಗಿ ರಾಜ್ಯವನ್ನು ಕಾಣುವಂತೆ ಪ್ರಧಾನಿ ಅವರನ್ನು ಕೋರಲಾಗುವುದು. ಪ್ರಧಾನಮಂತ್ರಿ ದೇಶಕ್ಕೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಅಲ್ಲ. ಅದನ್ನು ಅರಿತು ಮನಮೋಹನ್ ಸಿಂಗ್ ಅವರು ಕಾರ್ಯನಿರ್ವಹಿಸಲಿ ಎಂದರು.
ಕೇಂದ್ರದ ಯುಪಿಎ ಸರಕಾರಕ್ಕೆ ಜೆಡಿಎಸ್ ಬೇಷರತ್ ಬೆಂಬಲ ನೀಡಿದ್ದು, ಒಂದು ವೇಳೆ ಕುಮಾರಸ್ವಾಮಿ ಅವರು ಕೇಂದ್ರದಲ್ಲಿ ಸಚಿವರಾದರೆ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಬಹುದು ಎನ್ನುವ ಲೆಕ್ಕಾಚಾರ ಚಾಲ್ತಿಯಲ್ಲಿದೆ. ಇದಕ್ಕೆ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ನೂತನವಾಗಿ ರಚನೆಯಾಗುತ್ತಿರುವ ಯುಪಿಎ ಸರಕಾರದಲ್ಲಿ ಜೆಡಿಎಸ್ ಗೆ ಕೇಂದ್ರದ ಸಂಪುಟದಲ್ಲಿ ಸ್ಥಾನ ಸಿಗುವುದು ಕಷ್ಟಸಾಧ್ಯ ಎನ್ನುವ ವಾತಾವರಣ ನಿರ್ಮಾಣವಾಗಿದೆ.
(ದಟ್ಸ್ ಕನ್ನಡ ವಾರ್ತೆ)