ಪ್ರತಿಪಕ್ಷದ ನಾಯಕರಾಗಿ ಅಡ್ವಾಣಿ ಮುಂದುವರಿಕೆ
ನವದೆಹಲಿ, ಮೇ. 18 : ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸೋಲಿನ ಹೊಣೆಹೊತ್ತು ಸಕ್ರಿಯ ರಾಜಕೀಯದಿಂದ ದೂರ ಸರಿಯುವ ಮಾತನಾಡಿದ್ದ ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರ ಮನವೊಲಿಸುವ ಯತ್ನದಲ್ಲಿ ಬಿಜೆಪಿ ನಾಯಕರು ಯಶಸ್ವಿಯಾಗಿದ್ದಾರೆ. ಎಲ್ ಕೆ ಅಡ್ವಾಣಿ ಅವರು ಪ್ರತಿಪಕ್ಷದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸೋಮವಾರ ಸೋಲಿನ ಪರಾಮರ್ಶೆ ನಡೆಸಲು ಎನ್ ಡಿಎ ಮಿತ್ರ ಪಕ್ಷಗಳು, ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು, ಬಿಜೆಪಿ ಮುಖ್ಯಮಂತ್ರಿಗಳ ಕಾರ್ಯಕಾರಿ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದವರು. ಲೋಕಸಭೆ ಚುನಾವಣೆಯಲ್ಲಿ ಪಕ್ಷ ನೀರಸ ಪ್ರದರ್ಶನ ನೀಡಿದೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷವನ್ನು ಕೈಬಿಟ್ಟು ಹೋದರೆ, ಪಕ್ಷಕ್ಕೆ ಇನ್ನಷ್ಟ ನಷ್ಟವಾಗಲಿದೆ. ಆದ್ದರಿಂದ ನಿಮ್ಮ ನಿರ್ಧಾರವನ್ನು ಇನ್ನೊಂದು ಸಾರಿ ಅವಲೋಕನ ಮಾಡಿಕೊಳ್ಳಿ ಎಂದು ಅವರಲ್ಲಿ ವಿನಂತಿಸಿಕೊಂಡಿದ್ದೇವೆ ಎಂದು ಸಿಂಗ್ ಹೇಳಿದರು.
ಮುಂಬರುವ ಸಮಸ್ಯೆಗಳನ್ನು ಒಟ್ಟಾಗಿ ಎದುರಿಸೋಣ. ಮತ್ತೆ ಪಕ್ಷವನ್ನು ಕಟ್ಟೋಣ ಎಂದು ಮನವೊಲಿಸಲಾಗಿದೆ. ಅಡ್ವಾಣಿ ಅವರ ಉಪಸ್ಥಿತಿ ಮತ್ತು ಅವರ ಮಾರ್ಗದರ್ಶನದ ಅಗತ್ಯ ಬಿಜೆಪಿಗೆ ಖಂಡಿತಾವಾಗಿಯೂ ಇದೆ. ಈ ಎಲ್ಲ ವಿಷಯಗಳನ್ನು ಚರ್ಚಿಸಲಾಗಿದ್ದು, ಅಡ್ವಾಣಿ ಅವರು ಸಹಮತ ಸೂಚಿಸಿದ್ದಾರೆ ಎಂದು ಸಿಂಗ್ ಹೇಳಿದರು.
(ಏಜನ್ಸೀಸ್)
ಗರಬಡಿದಂತೆ ಕುಳಿತಿರುವ ಭಾರತೀಯ ಜನತಾ ಪಕ್ಷ