ಕಾಂಗ್ರೆಸ್ ಪಕ್ಷ ಹಾಸಿಗೆ ಹಿಡಿದಿದೆ, ವರುಣ್
ನವದೆಹಲಿ, ಮೇ. 12 : ಕಾಂಗ್ರೆಸ್ ಅವಸಾನದ ಅಂಚಿನಲ್ಲಿದೆ. ಇಂದೋ ನಾಳೆಯೋ ಅದರ ಕಥೆ ಖತಂ ಆಗಲಿದೆ. ಆದ್ದರಿಂದ ಈ ಪಕ್ಷದ ಬಗ್ಗೆ ಹೆಚ್ಚಿನ ಪ್ರಸ್ತಾಪ ಬೇಡ ಎಂದು ಬಿಜೆಪಿ ಫೈರ್ ಬ್ರ್ಯಾಂಡ್ ಪಿಲಿಭಿತ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಲೇವಡಿ ಮಾಡಿದ್ದಾರೆ.
ಅಂತಿಮ ಹಂತದ ಚುನಾವಣೆಯ ಹಿನ್ನೆಲೆಯಲ್ಲಿ ಬಹಿರಂಗ ಪ್ರಚಾರ ಕೊನೆಗೊಳಿಸಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಒಡೆದಾಳುವ ನೀತಿಯಿಂದ ಇಂದು ದೇಶದ ಭದ್ರತೆಗೆ ಅಪಾಯ ಉಂಟಾಗಿದೆ ಎಂದರು. ಮಾಯಾವತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ವರುಣ್, ಉತ್ತರ ಪ್ರದೇಶದಲ್ಲಿ ದುರಾಡಳಿತ ನಡೆಸುತ್ತಿರುವ ಬಿಎಸ್ಪಿ ಸರಕಾರಕ್ಕೆ ಜನತೆ ಬುದ್ಧಿ ಕಲಿಸಲಿದ್ದಾರೆ ಎಂದರು.
ದೆಹಲಿಯಲ್ಲಿ ದರ್ಬಾರು ನಡೆಸಬೇಕೆಂದು ಕನಸು ಕಾಣುತ್ತಿರುವ ಮಾಯಾವತಿ ಅವರ ಆಟ ನಡೆಯುವುದಿಲ್ಲ. ಇವರ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಸಂಸತ್ತಿನ ಬಾಗಿಲು ಚಿಕ್ಕದಿದೆ. ಆದ್ದರಿಂದ ಸಂಸತ್ತಿನೊಳಗೆ ಆನೆ ಪ್ರವೇಶಿಸಲು ಸಾಧ್ಯವಿಲ್ಲ ಎಂದು ಕಟುಕಿದರು. ಪ್ರಚೋದನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ನನ್ನ ವಿರುದ್ಧ ಕೆಲಸ ಮಾಡಿರುವವರಿಗೆ ನಂತರ ದಿನಗಳಲ್ಲಿ ನಾನೇನು ಎಂಬುದನ್ನು ತಿಳಿಸುವೆ ಎಂದು ವರುಣ್ ಗಾಂಧಿ ಹೇಳಿದರು.
(ಏಜನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications