ಎನ್ ಡಿಎ ಬಿಡಲ್ಲ. ಯುಪಿಎ ಸೇರಲ್ಲ, ನಿತೀಶ್
ಪಾಟ್ನಾ, ಮೇ. 10 : ಯುಪಿಎ ಜೊತೆಗೆ ಸಂಬಂಧ ಹಳಸಿದ ಹಿನ್ನೆಲೆಯಲ್ಲಿ ಆರ್ ಜೆಡಿ ಮುಖ್ಯಸ್ಥ ಲಾಲು ಹಾಗೂ ಲೋಕ ಜನ ಪಕ್ಷದ ನಾಯಕ ರಾಂವಿಲಾಸ್ ಪಾಸ್ವಾನ್ ದೂರಾದ ಬೆನ್ನಲ್ಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಯುಪಿಎ ತೆಕ್ಕೆಗೆ ತೆಗೆದುಕೊಳ್ಳಲು ಹರಸಾಹಸ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಪ್ರಯತ್ನ ವಿಫಲವಾಗಿದೆ. ಯುಪಿಎ ಸೇರ್ಪಡೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ನಿತೀಶ್ ಕುಮಾರ್ ಎನ್ ಡಿಎಯೇತರ ಒಕ್ಕೂಟವನ್ನು ಸೇರುವ ಪ್ರಶ್ನೆಯೇ ಇಲ್ಲ. ನಾನು ಸದ್ಯ ಎನ್ ಡಿಎದಲ್ಲಿ ಇರುವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಬಿಹಾರ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಪ್ರಶಂಸಿಸಿದ್ದರು. ಅಲ್ಲದೇ ಎಡಪಕ್ಷಗಳ ಮುಖಂಡ ಪ್ರಕಾಶ್ ಕಾರಟ್ ಕೂಡಾ ನಿತೀಶ್ ಕುಮಾರ್ ಭೇಟಿ ಮಾತುಕತೆ ನಡೆಸಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ನಿತೀಶ್ ಕುಮಾರ್ ಅವರು ಯುಪಿಎ ಸರಕಾರಕ್ಕೆ ಬೆಂಬಲ ನೀಡಲಿದ್ದಾರೆ ಎಂದು ರಾಹುಲ್ ಹೇಳಿಕೆ ನೀಡಿದ್ದರು. ಇದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಉಂಟು ಮಾಡಿತ್ತು. ಅಲ್ಲದೇ ಒಂದು ಕಾಲದ ಮಿತ್ರ, ಸದ್ಯದ ವೈರಿ ಲಾಲು ಪ್ರಸಾದ್ ಯಾದವ್ ಅವರ ನಿದ್ದೆಗೆಡಿಸಿತ್ತು. ರಾಹುಲ್ ಹೇಳಿಕೆ ನಂತರ ಅನೇಕ ಉಹಾಪೋಹಗಳು ರೆಕ್ಕೆ-ಪುಕ್ಕ ಕಟ್ಟಿಕೊಂಡು ಕುಣಿದಾಡಿದ್ದವು.
ನಾನು ಹಾಗೂ ನನ್ನ ಪಕ್ಷ ಈವರೆಗೂ ಎನ್ ಡಿಎದೊಂದಿಗೆ ಇದ್ದೇವೆ. ಮುಂದೆಯೂ ಇರುತ್ತೇವೆ. ಅದರಲ್ಲಿ ಯಾವುದೇ ಸಂಶಯಬೇಡ. ಸದ್ಯದವರೆಗೂ ಯಾವುದೇ ಎನ್ ಡಿಎಯೇತರ ಯಾವುದೇ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
(ಏಜನ್ಸೀಸ್)
ನಿತೀಶ್ ವಿರುದ್ಧದ ಹೇಳಿಕೆಗೆ ಬೆಲೆತೆತ್ತ ಮೊಯ್ಲಿ











Click it and Unblock the Notifications