ಮಾಯಾ ಸೋಲಿಸಲು ಬಿಜೆಪಿಗೂ ಬೆಂಬಲ : ಎಸ್ಪಿ
ಮೈನ್ ಪುರಿ, (ಉ.ಪ್ರ) ಮೇ. 7 : ಉತ್ತರಪ್ರದೇಶದಲ್ಲಿರುವ ಭ್ರಷ್ಟ ಸರಕಾರವನ್ನು ಪತನಗೊಳಿಸಲು ಯಾರು ಕೈಜೋಡಿಸುತ್ತಾರೋ ಅವರಿಗೆ ನಮ್ಮ ಬೆಂಬಲವಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ. ಮಾಯಾವತಿ ನೇತೃತ್ವದ ಭ್ರಷ್ಟ ಸರಕಾರ ತೊಲಗಬೇಕು. ಇದಕ್ಕಾಗಿ ಎನ್ ಡಿ ಎ ಅಥವಾ ಯುಪಿಎ ಒಕ್ಕೂಟಕ್ಕೆ ನಮ್ಮ ಪಕ್ಷ ಬೆಂಬಲ ನೀಡಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಯುವಕರು, ವ್ಯಾಪಾರಿಗಳು, ರೈತರು ಬಿಎಸ್ಪಿ ಸರಕಾರದ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ. ಬಿಜೆಪಿ ಅಥವಾ ಕಾಂಗ್ರೆಸ್ ಒಕ್ಕೂಟವಿರಲಿ, ಯಾರು ಮಾಯಾವತಿ ಸರಕಾರವನ್ನು ವಜಾ ಮಾಡುತ್ತಾರೋ ಅವರಿಗೆ ನಮ್ಮ ಬೆಂಬಲ. ಮೊದಲ ಮೂರು ಹಂತದ ಚುನಾವಣೆಯ ನಂತರ ಕೇಂದ್ರದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವ ಲಕ್ಷಣಗಳು ಇಲ್ಲ. ಸಮಾಜವಾದಿ ಪಕ್ಷ ಇಲ್ಲದೇ ಯಾರಿಗೂ ಸರಕಾರ ರಚಿಸಲು ಸಾಧ್ಯವಿಲ್ಲ. ಚುನಾವಣಾ ಫಲಿತಾ೦ಶದ ನಂತರ ನಮ್ಮ ಸಂಸದರು ಮತ್ತು ಸಂಸದೀಯ ಮಂಡಳಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.
ಈ ಮೂಲಕ ಮುಲಾಯಂ ಹೇಳಿಕೆ ರಾಜಕೀಯ ಸಂಚಲನ ಮೂಡಿಸುವುದಂತೂ ಖಚಿತ. ಎನ್ ಡಿಎ ಮೈತ್ರಿಕೂಟದಿಂದ ದೂರಸರಿದಿರುವ ಬಿಜೆಡಿ ಮುಖಂಡ ನವೀನ ಪಟ್ನಾಯಕ್ ಸ್ಥಾನವನ್ನು ಸಮಾಜವಾದಿ ಪಕ್ಷ ತುಂಬಲಿದೆಯೋ ? ಜಾತ್ಯಾತೀತ ಪಕ್ಷವೆಂದೇ ಗುರುತಿಸಿಕೊಂಡಿರುವ ಎಸ್ಪಿ ಎನ್ ಡಿಎಯೊಂದಿಗೆ ಕೈಜೋಡಿಸಲಿದೆಯೇ ? ಎಸ್ಪಿ ನಾಯಕ ಅಜಂ ಖಾನ್ ಬಿಜೆಪಿಯೊಂದಿಗೆ ಕೈಜೋಡಿಸಲು ಸಮ್ಮತಿಸುವರೆ ? ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ಒಟ್ಟಿನಲ್ಲಿ ಮುಲಾಯಂ ಎಸೆದಿರುವ ಬಾಂಬ್ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
(ಏಜನ್ಸೀಸ್)
ನಾನೇಕೆ ಪ್ರಧಾನಿಯಾಗಬಾರದು: 'ಮಾಯಾ' ಪ್ರಶ್ನೆ
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications