ನಾಲ್ಕನೇ ಹಂತದ ಮತದಾನ ಆರಂಭ
ನವದೆಹಲಿ, ಮೇ. 7 : ನಾಲ್ಕನೇ ಹಂತದ ಲೋಕಸಭೆ ಚುನಾವಣೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಕಾಂಗ್ರೆಸ್ ಪಕ್ಷದ ಯುವರಾಣಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಸೋನಿಯಾ ಗಾಂಧಿ, ನಿವೃತ್ತ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ, ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ, ಆರ್ ಜೆಡಿ ನಾಯಕ ಲಾಲು ಪ್ರಸಾದ ಯಾದವ್, ಕಪಿಲ್ ಸಿಬಲ್, ಶೇಖರ್ ಸುಮನ್, ಶತ್ರುಘ್ನ ಸಿನ್ಹಾ ಸೇರಿದಂತೆ ಅನೇಕ ಘಟನಾಘಟಿ ಮುಖಂಡರು ತಮ್ಮ ಹಕ್ಕನ್ನು ಚಲಾಯಿಸಿದರು. ಮತದಾನ ಬಹುತೇಕ ಶಾಂತಿಯುತವಾಗಿ ಬಿರುಸುನಿಂದ ಸಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ, ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್, ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್, ಫಾರೂಕ್ ಅಬ್ದುಲ್, ಸಚಿನ್ ಪೈಲೆಟ್, ಶೇಖರ್ ಸುಮನ್, ಶತ್ರುಘ್ನ ಸಿನ್ಹಾ ಸೇರಿದಂತೆ ಅನೇಕ ಮುಖಂಡರ ಹಣೆಬರಹವನ್ನು ಇಂದು ಮತದಾರರು ಬರೆಯಲಿದ್ದಾರೆ.
ನಾಲ್ಕನೇ ಹಂತದಲ್ಲಿ ಎಂಟು ರಾಜ್ಯ ಹಾಗೂ ಕೇಂದ್ರಾಡಳಿತ ಸೇರಿದಂತೆ ಒಟ್ಟು 85 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ಶುರುವಾಗಿದೆ. ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಕಲ್ಯಾಣ ಸಿಂಗ್ ಇಟಾ ಲೋಕಸಭೆ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆ ನಡೆಸಿದ್ದಾರೆ.
ಅಲ್ಲದೇ, ರಾಜಸ್ತಾನ-25, ಹರಿಯಾಣ-10, ದೆಹಲಿ-7, ಬಿಹಾರ್-3, ಜಮ್ಮು ಕಾಶ್ಮೀರ-1, ಪಂಜಾಬ-18, ಉತ್ತರ ಪ್ರದೇಶ-18 ಹಾಗೂ ಪಶ್ಚಿಮ ಬಂಗಾಲ-17 ಲೋಕಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 9.46 ಕೋಟಿ ಜನರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ. 1.29 ಲಕ್ಷ ಮತಗಟ್ಟೆಗಳನ್ನು ರಚಿಸಲಾಗಿದ್ದು, ಸುಮಾರು 6 ಲಕ್ಷ ಜನರು ಮತದಾನ ಪ್ರಕ್ರಿಯೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
(ಏಜನ್ಸೀಸ್)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications