ನಾನೇಕೆ ಪ್ರಧಾನಿಯಾಗಬಾರದು: 'ಮಾಯಾ' ಪ್ರಶ್ನೆ
ಆಗ್ರದಲ್ಲಿ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಎಲ್ಲ ಮುಖಂಡರೂ ಪ್ರಧಾನಮಂತ್ರಿ ಆಗಬೇಕು ಎಂದು ಆಸೆ ಪಡುತ್ತಾರೆ. ಅದರಲ್ಲಿ ನಾನು ಒಬ್ಬಳು ಎಂದ ಮಾಯಾವತಿ, ನಾನು ಕೂಡಾ ಅನೇಕ ಚುನಾವಣೆಗಳನ್ನು ಎದುರಿಸಿದ್ದೇನೆ, ಗೆದ್ದಿದ್ದೇನೆ, ಮುಖ್ಯಮಂತ್ರಿ ಆಗಿರುವೆ. ಇಷ್ಟೆಲ್ಲಾ ಅನುಭವ ಇರುವ ನನಗೆ ಪ್ರಧಾನಮಂತ್ರಿ ಆಗುವ ಯೋಗ್ಯತೆ ಇಲ್ಲವೆ ಎಂದು ಅವರು ಪ್ರಶ್ನಿಸಿದರು.
ರಾಜ್ಯಸಭಾ ಸದಸ್ಯರಾಗಿರುವ ಮನಮೋಹನ್ ಸಿಂಗ್ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸಿರುವ ಸೋನಿಯಾ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಮಾಯಾವತಿ, ಇದು ಪ್ರಜಾಪ್ರಭುತ್ವದ ವಿರೋಧಿ ಕೃತ್ಯ ಎಂದು ನಿಂದಿಸಿದರು. ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ಈ ಪಕ್ಷದ ಬುನಾದಿಗೆ ಗೆದ್ದಿಲು ಹಿಡಿದಿದೆ. ಶೀಘ್ರದಲ್ಲಿ ಅದು ಅವಸಾನವಾಗಲಿದೆ ಎಂದು ಅವರು ಲೇವಡಿ ಮಾಡಿದರು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿ ಅತೀ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೇ, ದೆಹಲಿ ಗದ್ದುಗೆ ಏರಲು ನನಗೊಂದು ಅವಕಾಶ ನೀಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡರು.
(ಏಜನ್ಸೀಸ್)