ಬೀದರ್ ಶಂಕಿತ ಉಗ್ರನ ಬಗ್ಗೆ ಮಾಹಿತಿ ಇಲ್ಲ: ಆಚಾರ್ಯ
ಬೆಂಗಳೂರು, ಮೇ.4: ಹೈದರಾಬಾದ್ ಪೊಲೀಸರಿಗೆ ಸೆರೆ ಸಿಕ್ಕಿರುವ ಶಂಕಿತ ಲಷ್ಕರ್ ಉಗ್ರ ಮೊಹಮ್ಮದ್ ನಿಸಾರ್ ಬಗ್ಗೆ ತಮಗೆ ಯಾವುದೇ ಮಾಹಿತಿಯಿಲ್ಲವೆಂದು ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ಹೇಳಿದ್ದಾರೆ.
ಪತ್ರಿಕೆಗಳಲ್ಲಿ ಬಂದಂತಹ ವರದಿ ನೋಡಿದ್ದೇನೆ. ಈ ಕುರಿತು ಹಿರಿಯ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದು ಯಾವುದೇ ಮಾಹಿತಿ ಬಂದಿಲ್ಲ ಎಂದರು. ಹೈದರಾಬಾದ್ ನ ವಿಶೇಷ ತನಿಖಾ ತಂಡ ಶುಕ್ರವಾರ ರಾತ್ರಿ ಜಹೀರಾಬಾದ್ ಬಳಿ ನಿಸಾರ್ ನನ್ನು ಬಂಧಿಸಿದ್ದರು. ಈತ ಪಾಕಿಸ್ತಾನದ ಐಎಸ್ ಐ ಹಾಗೂ ಲಷ್ಕರ್ ಎ ತೋಯ್ಬಾ ಸಂಘಟನೆಯ ಸಂಪರ್ಕ ಹೊಂದಿದ್ದಾನೆ ಎಂದು ಶಂಕಿಸಲಾಗಿದೆ.
ಆರು ವರ್ಷಗಳಿಂದ ಬೀದರ್ ನ ಮನ್ನಾಏಖಳ್ಳಿಯಲ್ಲಿ ವಾಸವಾಗಿದ್ದ ನಿಸಾರ್ ಆಂಧ್ರದ ಮೀಸಲು ಪೊಲೀಸ್ ಪಡೆಯಲ್ಲಿ ಪೇದೆಯಾಗಿದ್ದ. 2000ದಲ್ಲಿ ಲಷ್ಕರ್ ಎ ತೋಯ್ಬಾ ಸೇರಿದ್ದ ಎಂದು ಮಾಧ್ಯಮಗಳು ಪ್ರಕಟಿಸಿದ್ದವು. ಬೇರೆ ಬೇರೆ ಹೆಸರುಗಳೊಂದಿಗೆ ಪರಿಚಿತನಾಗಿದ್ದ ನಿಸಾರ್ ಮನ್ನಾಏಖಳ್ಳಿಯ ಕಾಲೋನಿಯಲ್ಲಿ ಬಾಡಿಗೆ ಕೋಣೆಯೊಂದರಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಪತ್ನಿ ಫರ್ಜಾನಾ ಹಾಗೂ ಪುತ್ರಿ ಹರೀಶಾ ಜತೆ ವಾಸಗಿದ್ದ.
(ದಟ್ಸ್ ಕನ್ನಡ ವಾರ್ತೆ)