ಬೆಂ. ಗ್ರಾಮಾಂತರದಲ್ಲಿ ಮರುಮತದಾನಕ್ಕೆ ಆಗ್ರಹ
ಬೆಂಗಳೂರು, ಏ. 24 : ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಭಾರಿ ಅಕ್ರಮ ಎಸಗಿರುವ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಮರುಮತದಾನ ನಡೆಸಬೇಕು ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ರಾಜ್ಯ ಚುನಾವಣೆ ಆಯೋಗವನ್ನು ಒತ್ತಾಯಿಸಿವೆ.
ಚೆನ್ನಪಟ್ಟಣದ ಮತಕೇಂದ್ರವೊಂದರಲ್ಲಿ ಮತಗಟ್ಟೆ ಅಧಿಕಾರಿಯೇ ಜೆಡಿಎಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪರವಾಗಿ ಮತ ಚಲಾಯಿಸಿ ಎಂದು ಹೇಳಿದ್ದಾರೆ. ಇದರಿಂದ ಅಪಾರ ಸಂಖ್ಯೆ ಮತದಾರರು ಜೆಡಿಎಸ್ ಗೆ ಮತ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಮರು ಮತದಾನ ನಡೆಸಬೇಕು ಎಂದು ತೇಜಸ್ವಿನಿಗೌಡ ಮತ್ತು ಬಿಜೆಪಿ ವಕ್ತಾರ ಧನಂಜಯ ಕುಮಾರ್ ಒತ್ತಾಯಿಸಿದ್ದಾರೆ.
ಈಗಾಗಲೇ ಬಿಜೆಪಿ ವಕ್ತಾರ ಧನಂಜಯ ಕುಮಾರ್ ಅವರು ಮರುಮತದಾನ ನಡೆಸುವಂತೆ ರಾಜ್ಯ ಚುನಾವಣೆ ಆಯೋಗಕ್ಕೆ ದೂರನ್ನು ಕೂಡಾ ಸಲ್ಲಿಸಿದ್ದಾರೆ. ಜೆಡಿಎಸ್ ಬೆಂಬಲಿಗ ಎನ್ನಲಾದ ರಾಮು ಎಂಬ ಮತಗಟ್ಟೆ ಅಧಿಕಾರಿ ಈ ಕೆಲಸ ಮಾಡಿದ್ದಾನೆ. ರಾಮು ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರದುರ್ಗದಲ್ಲಿಯೂ ಇಂತಹದೇ ಘಟನೆ ನಡೆದಿದ್ದು, ಮತಗಟ್ಟೆ ಅಧಿಕಾರಿ ನಿರ್ಧಿಷ್ಟ ಪಕ್ಷಕ್ಕೆ ಮತ ನೀಡಿ ಎಂದು ಜನರನ್ನು ಒತ್ತಾಯಿಸುತ್ತಿದ್ದ ಎಂಬ ಆರೋಪದ ಮೇಲೆ ಚಿತ್ರದುರ್ಗದ ದ್ಯಾಮನಹಳ್ಳಿಯಲ್ಲಿ ಪ್ರತಿಭಟನೆ ನಡೆದಿದೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು