ಪ್ರಥಮ ಹಂತದ ಚುನಾವಣೆ : ಶೇ.55ರಷ್ಟು ಮತದಾನ

ರಾಜ್ಯ ಉಚ್ಚ ನ್ಯಾಯಾಲಯ ಕಟ್ಟುನಿಟ್ಟು ಮಾಡಿದ್ದ ರಜಾದಿನದಂದು ಮಜಾ ಉಡಾಯಿಸಿರುವ ನಗರದ ನಾಗರಿಕರನೇಕರು ಮತಗಟ್ಟೆಯ ಬಳಿ ಸುಳಿಯದಿರುವುದು ದಿನದ ಪ್ರಮುಖ ಅಂಶ. ಆದರೆ, ಗ್ರಾಮಾಂತರ ಪ್ರದೇಶಗಳಲ್ಲಿ ಜನ ಉತ್ಸಾಹದಿಂದಲೇ ಮತದಾನ ಮಾಡಿದ್ದಾರೆ. ತುಮಕೂರಿನಲ್ಲಿ ಶತಾಯುಷಿಯಾದ ಶ್ರೀ ಶಿವಕುಮಾರ ಸ್ವಾಮೀಜಿ ಮತದಾನ ಮಾಡಿದ್ದು ವಿಶೇಷ. ಆರಂಭದಲ್ಲಿ ಮಂದಗತಿಯಲ್ಲಿಯೇ ಸಾಗಿದ್ದ ಮತದಾನ ಮಧ್ಯಾಹ್ನದ ನಂತರ ಚುರುಕುಗೊಂಡಿತು. 'ಪ್ರಜ್ಞಾವಂತ' ಮತದಾರರ ಕ್ಷೇತ್ರವೆಂದೇ ಕರೆಯಲಾಗಿದ್ದ ಬೆಂಗಳೂರು ದಕ್ಷಿಣದಲ್ಲಿ ಹೆಚ್ಚು ಜನ ಮತ ನೀಡಲು ಬರದಿರುವುದು ನಿರಾಶೆ ತಂದಿತು.
ಯಶವಂತಪುರ ಕ್ಷೇತ್ರದ ಸುಮಾರು 300ಕ್ಕೂ ಅಧಿಕ ಸಂಖ್ಯೆ ಜನರು ಹೆಸರುಗಳು ಮತದಾರರ ಪಟ್ಟಿಯಲ್ಲಿ ಇಲ್ಲದಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಕೊಪ್ಪಳ ಜಿಲ್ಲೆಯ ಚುಂಚನಕಲ್ಲು ಗ್ರಾಮಸ್ಥರು ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ಮತದಾನ ಬಹಿಷ್ಕರಿಸಿರುವ ಘಟನೆಯೂ ನಡೆದಿದೆ. ರಾಮನಗರ, ವಿದ್ಯಾರಣ್ಯಪುರ, ತುರುವೇಕೆರೆ ಸೇರಿದಂತೆ ಕೆಲವು ಮತಗಟ್ಟೆಗಳಲ್ಲಿ ಆರಂಭದಲ್ಲೇ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡು ಮತದಾನಕ್ಕೆ ಅಡ್ಡಿಯಾಯಿತು. ದೋಷಪೂರಿತ ಮತಯಂತ್ರ ಬದಲಿಸಿ ಮತದಾನಕ್ಕೆ ಸ್ಥಳೀಯ ಚುನಾವಣೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು. ರಾಮನಗರದಲ್ಲಿ ಮತದಾರರಿಗೆ ಹಂಚಲು ಮನೆಯೊಂದರಲ್ಲಿ ತಂದಿಟ್ಟಿದ್ದ ಸುಮಾರು 13 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮತದಾನದ ದಿನವೇ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಹುಡುಕುವುದು ಸಾಮಾನ್ಯ. ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲ ಎಂದಾಕ್ಷಣ ಆಕ್ರೋಶಗೊಳ್ಳುವುದು, ಪ್ರತಿಭಟನೆ ನಡೆಸುವುದು ರೂಢಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಚುನಾವಣೆ ಆಯೋಗ ಇಂತಹ ಅನಗತ್ಯ ಗೊಂದಲಕ್ಕೆ ಕಡಿವಾಣ ಹಾಕುವ ಅಗತ್ಯವಿದೆ. ಇಂಟರ್ ನೆಟ್ ಸೇರಿ ಮುಂದುವರೆದ ಸೌಲಭ್ಯಗಳ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ಇದೆಯೋ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಇಷ್ಟಿದ್ದರೂ ಪ್ರಜ್ಞಾವಂತರು ಸೇರಿದಂತೆ ನೂರಾರು ಮತದಾರರು ಮತದಾನದಿಂದ ವಂಚಿತರಾಗಿರುವುದು ಇಂದಿನ ಹೈಲೈಟ್.
ನೆಲಮಂಗಲದ ಸಮೀಪದ ಗೆದ್ದಲಹಳ್ಳಿ ಮತಕೇಂದ್ರದಲ್ಲಿ ಮೈಕ್ರೋ ವೀಕ್ಷಕರಾಗಿದ್ದ ಟಿಬಿ ಕೃಷ್ಣಪ್ಪ ಎಂಬ ಅಧಿಕಾರಿ ಅಕಾಲಿಕ ಮರಣದಿಂದ ಕೆಲ ಕಾಲ ಈ ಪ್ರದೇಶದಲ್ಲಿ ಮತದಾನ ಸ್ಥಗಿತಗೊಂಡಿತ್ತು. ಕನಕಪುರದ ಸಮೀಪದ ಹೊಸಹಳ್ಳಿ ಗ್ರಾಮದ ಟಿ ಬಿ ಕೃಷ್ಣಪ್ಪ ಹೃದಯಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆ ಸಾಗಿಸುವಾಗ ಅವರು ನಿಧನರಾದರು. ಕಷ್ಣಪ್ಪ ಅವರು ತುಮಕೂರಿನಲ್ಲಿರುವ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಕ್ಷೇತ್ರವಾರು ಮತದಾನದ ವಿವರ
ಬೆಂಗಳೂರು ಗ್ರಾಮಾಂತರ - ಶೇ. 45
ಬೆಂಗಳೂರು ಕೇಂದ್ರ - ಶೇ. 48
ಬೆಂಗಳೂರು ದಕ್ಷಿಣ - ಶೇ. 45
ಬೆಂಗಳೂರು ಉತ್ತರ - ಶೇ. 39
ಬೆಳಗಾವಿ - ಶೇ. 51
ಚಿಕ್ಕಬಳ್ಳಾಪುರ - ಶೇ. 52
ಚಿತ್ರದುರ್ಗ - ಶೇ. 37
ಉತ್ತರ ಕನ್ನಡ - ಶೇ. 44
ರಾಯಚೂರು - ಶೇ. 35
ಕೊಪ್ಪಳ - ಶೇ. 41
ಚಿಕ್ಕೋಡಿ - ಶೇ. 55
ಬಳ್ಳಾರಿ - ಶೇ. 48
ಕೋಲಾರ - ಶೇ. 51
ವಿಜಾಪುರ - ಶೇ. 37
ಗುಲ್ಬರ್ಗಾ - ಶೇ. 40
ತುಮಕೂರು - ಶೇ. 48
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications