ಮುಂಬೈ ಜೈಲಿನಲ್ಲಿ ಸಾಧ್ವಿ ಪ್ರಗ್ಯಾಸಿಂಗ್ ಮೇಲೆ ಹಲ್ಲೆ

ಆರೋಪಿ ಮುಮ್ತಾಜ್ ಶೇಖ್ ತನ್ನ ಮೇಲೆ ಹಲ್ಲೆ ನಡೆಸಿದ ಪರಿಣಾಮವಾಗಿ ಮುಖ, ಮೂಗು ಹಾಗೂ ಕುತ್ತಿಗೆಗೆ ತೀವ್ರ ಪೆಟ್ಟಾಗಿರುವುದಾಗಿ ಪ್ರಗ್ಯಾಸಿಂಗ್ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಈ ಬಗ್ಗೆ ಖಾಸಗಿ ದೂರು ದಾಖಲಿಸಿಕೊಳ್ಳಲು ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ(ಮೊಕಾ) ನ್ಯಾಯಾಲಯಕ್ಕೆ ಸಾಧ್ವಿ ಅವರ ಪರ ವಕೀಲ ಜಿ ಸವಾನಿ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಂ ಆರ್ ಪುರಾಣಿಕ್ ಅನುಮತಿ ನೀಡಿದ್ದು, ಸಾಧ್ವಿ ಬುಧವಾರ ಮಜಗಾಂವ್ ಮೆಟ್ರೋಪಾಲಿಟನ್ ನ್ಯಾಯಾಲಯಕ್ಕೆ ದೂರು ನೀಡಲಿದ್ದಾರೆ.
ಆರೋಪಿ ಶೇಖ್ ಸಾಧ್ವಿ ವಿರುದ್ಧ ಕೆಟ್ಟ ಭಾಷೆ ಬಳಸಿ ಕಾರಾಗೃಹದಿಂದ ಹೊರಗೆಸೆಯುವುದಾಗಿ ಆಗಾಗ ಬೆದರಿಕೆ ಹಾಕಿದ್ದು, ಸೋಮವಾರ ಮಧ್ಯಾಹ್ನ ಊಟದ ತಟ್ಟೆಯಿಂದ ಹಲ್ಲೆ ಎಸಗಿದ್ದಾನೆ. ಮಹಾರಾಷ್ಟ್ರ ಭಯಾನಕ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಶೇಖ್ ನನ್ನು ಬಂಧಿಸಿ ಜೈಲಿನಲ್ಲಿ ಇಡಲಾಗಿದೆ. ಸಾಧ್ವಿ ಪ್ರಗ್ಯಾಸಿಂಗ್ ಕಳೆದ ವರ್ಷ ಸೆಫ್ಟೆಂಬರ್ ತಿಂಗಳಲ್ಲಿ ನಡೆದ ಮಾಲೇಗಾಂವ್ ಸರಣಿ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದಾರೆ. ಸ್ಫೋಟದಲ್ಲಿ 30 ಮಂದಿ ಮೃತಪಟ್ಟು, 100 ಅಧಿಕ ಮಂದಿ ಗಾಯಗೊಂಡಿದ್ದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications