ದಲಿತ ಮುಖಂಡನನ್ನು ಉಪಮುಖ್ಯಮಂತ್ರಿಯನ್ನಾಗಿಸಿ: ಖರ್ಗೆ
ಪ್ರತಿಪಕ್ಷದ ನಾಯಕ ಸ್ಥಾನವನ್ನು ಕಸಿದುಕೊಂಡಿರುವ ಕಾಂಗ್ರೆಸ್ ಪಕ್ಷ ದಲಿತರಿಗೆ ಘನಘೋರ ಅನ್ಯಾಯ ಮಾಡಿದೆ ಎಂದು ಯಡಿಯೂರಪ್ಪ ಪ್ರಚಾರ ಸಭೆಗೆ ಹೋದಲ್ಲೆಲ್ಲಾ ಆರೋಪಿಸುತ್ತಿರುವುದಕ್ಕೆ ಪ್ರತಿಯಾಗಿ ಖರ್ಗೆ ತಿರುಗೇಟು ನೀಡಿದರು. ಮುಖ್ಯಮಂತ್ರಿಗಳೆ ಬರೀ ಬಾಯಿ ಮಾತಿನಿಂದ ದಲಿತರಿಗೆ ಮೋಸ ಮಾಡುವುದನ್ನು ಕೈಬಿಡಿ. ನಿಮ್ಮ ಆಟ ನಡೆಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ ಅವರು, ಜನರಿಗೆ ನಿಮ್ಮ ನಾಟಕ ಅರ್ಥವಾಗುತ್ತೆ, ನಿಮ್ಮ ಮೊಸಳೆ ಕಣ್ಣೀರು ಜಗತ್ತಿಗೆ ಗೊತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ದಲಿತರ ಉದ್ಧಾರ ಮಾಡಬೇಕು. ಶತಮಾನಗಳಿಂದ ಶೋಷಣೆಗೆ ಒಳಗಾಗಿರುವ ಆ ವರ್ಗಕ್ಕೆ ನ್ಯಾಯ ಸಲ್ಲಿಸಬೇಕು ಎಂಬ ಪ್ರಾಮಾಣಿಕ ಪ್ರಯತ್ನ ನಿಮ್ಮದಾಗಿದ್ದರೆ, ಇಂದೇ ಒಬ್ಬ ದಲಿತ ಮುಖಂಡನನ್ನು ಉಪಮುಖ್ಯಮಂತ್ರಿಯಾಗಿ ನೇಮಕ ಮಾಡಿಕೊಂಡು ನಂತರ ಮಾತನಾಡಿ ಎಂದು ಖರ್ಗೆ ವಾಗ್ದಾಳಿ ನಡೆಸಿದರು. ಬಿಜೆಪಿ ಪಕ್ಷ ಹಾಗೂ ಅದರ ಮುಖಂಡರ ಮನಸ್ಥಿತಿ ಹೇಗೆ ಎಂಬುದನ್ನು ನಾನು ನೋಡಿದ್ದೇನೆ. ಐದು ದಶಕಗಳಿಂದ ನಾನು ಸಾರ್ವಜನಿತ ಜೀವನದಲ್ಲಿರುವೆ. ಯಡಿಯೂರಪ್ಪ ಅವರಂತ ನಾಟಕ ಮಾಡುವ ವ್ಯಕ್ತಿಗಳನ್ನು ಹಲವಾರು ಜನರನ್ನು ನೋಡಿದ್ದೇನೆ ಎಂದರು.
ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷದ ಸ್ಥಾನ ನೀಡುವ ಸಲುವಾಗಿ ಕಾಂಗ್ರೆಸ್ ಪಕ್ಷ ಆ ಸ್ಥಾನ ಹೊಂದಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಂದ ರಾಜೀನಾಮೆ ಪಡೆದುಕೊಂಡಿದೆ. ಇದೀಗ ಖರ್ಗೆ ಗುಲ್ಬರ್ಗಾ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಹುರಿಯಾಳು.
(ದಟ್ಸ್ ಕನ್ನಡ ವಾರ್ತೆ)