ನಾಮಪತ್ರ ಸಲ್ಲಿಸಿದ ಕೃಷ್ಣ ಭೈರೇಗೌಡ, ವಾಟಾಳ್

ಬಿಜೆಪಿಯ ಅನಂತಕುಮಾರ್, ಕಾಂಗ್ರೆಸ್ ನ ಕೃಷ್ಣ ಭೈರೇಗೌಡ, ವಾಟಾಳ್ ಪಕ್ಷದಿಂದ ವಾಟಾಳ್ ನಾಗರಾಜ್ ಮತ್ತು ಪಕ್ಷೇತ್ರರರಾಗಿ ಕ್ಯಾಪ್ಟನ್ ಗೋಪಿನಾಥ್ ಲೋಕಸಭೆ ಚುನಾವಣಾ ಕಣಕ್ಕಿಳಿದಿರುವುದರಿಂದ ಬೆಂಗಳೂರು ದಕ್ಷಿಣ ಕ್ಷೇತ್ರ ಭಾರೀ ಪ್ರತಿಷ್ಠೆಯ ಕಣವಾಗಿ ಉಳಿದಿದೆ. ಜೆಡಿಎಸ್ ಪಕ್ಷದ ಪರ ಪ್ರೊಪೆಸರ್ ರಾಧಾಕೃಷ್ಣ ಕೂಡ ಕಣದಲ್ಲಿದ್ದಾರೆ.
ಪತ್ನಿ ಮೀನಾಕ್ಷಿ ಮತ್ತು ಬೆಂಬಲಿಗರೊಡಗೂಡಿ ನಾಮಪತ್ರ ಸಲ್ಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಕೃಷ್ಣ ಭೈರೇಗೌಡ, ಬೆಂಗಳೂರು ದಕ್ಷಿಣದಲ್ಲಿ ಪ್ರಜ್ಞಾವಂತ ಮತದಾರರಿದ್ದು, ಯುವ ನೇತಾರರಿಗೆ ಮನ್ನಣೆ ನೀಡಿ ಮತ ನೀಡಲಿದ್ದಾರೆ, ತಾವು ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡಪರ ಸಂಘಟನೆಗಳ ಬೆಂಬಲವಿರುವ ವಾಟಾಳ್ ನಾಗರಾಜ್ ಅವರು, ಸಂಸತ್ತಿನಲ್ಲಿ ಕನ್ನಡ ಧ್ವಜ ಹಾರಬೇಕೆಂದಿದ್ದರೆ, ಕೆಂಪು ಕೋಟೆಯ ಮೇಲೆ ಕನ್ನಡ ಧ್ವಜ ಹಾರಬೇಕೆಂದಿದ್ದರೆ ತಾವು ಗೆಲ್ಲಲೇಬೇಕು, ಗೆದ್ದೇ ಗೆಲ್ಲುತ್ತೇನೆ ಎಂದು ತಮ್ಮದೇ ವರಸೆಯಲ್ಲಿ ಹೇಳಿದರು.
ಅನಂತಕುಮಾರ್ ಸತತ ಐದನೇ ಬಾರಿಗೆ ಸಂಸದನಾಗಲು ಸ್ಪರ್ಧಿಸುತ್ತಿದ್ದರೆ ಉಳಿದ ಮೂವರು ಪ್ರಥಮ ಬಾರಿಗೆ ಅದೃಷ್ಟ ಮತ್ತು ಬಲಪರೀಕ್ಷೆಗೆ ಇಳಿದಿದ್ದಾರೆ. ಇವರಲ್ಲಿ ಅನಂತ್, ಗೋಪಿನಾಥ್ ಮತ್ತು ಕೃಷ್ಣ ಭೈರೇಗೌಡ ಹೈಟೆಕ್ ರೀತಿಯಲ್ಲಿ ಅಂತರ್ಜಾಲ ತಾಣಗಳ ಮುಖಾಂತರ ಪ್ರಚಾರಕ್ಕಿಳಿದಿರುವುದು ವಿಶೇಷ.
ವಿನೂತನ ಪ್ರಚಾರ ತಂತ್ರ : ಇದೆಲ್ಲದರ ಜೊತೆಗೆ ಅನಂತಕುಮಾರ್ ಮತ್ತೊಂದು ವಿನೂತನ ರೀತಿಯಲ್ಲಿ ಪ್ರಚಾರಕ್ಕಿಳಿದಿದ್ದು, ಬೀದಿ ನಾಟಕ ಮತ್ತು ರಂಗಗೀತೆಗಳ ಮುಖಾಂತರ ಮತದಾರರನ್ನು ಸೆಳೆಯುವ ಪ್ರಯತ್ನಕ್ಕಿಳಿದ್ದಿದ್ದಾರೆ. ಇವುಗಳ ಮುಖಾಂತರ ಸಾಮಾಜಿಕ ಕಳಕಳಿಯನ್ನು ಬಿತ್ತುವ ಪ್ರಯಾಸಕ್ಕಿಳಿದಿದ್ದಾರೆ.
ರಂಗಕರ್ಮಿ ಮತ್ತು ಬಿಜೆಪಿ ನಾಯಕ 'ಮುಖ್ಯಮಂತ್ರಿ' ಚಂದ್ರು ಅವರ ನೇತೃತ್ವದಲ್ಲಿ ಟೌನ್ ಹಾಲ್ ಮುಂದೆ 30ಕ್ಕೂ ಹೆಚ್ಚು ಕಲಾವಿದರು ರಂಗಪ್ರದರ್ಶನ ನೀಡಲಿದ್ದಾರೆ. ಗುರುವಾರ ರಂಗಪ್ರದರ್ಶನ ಪ್ರಾರಂಭವಾಗಿದ್ದು, ಸತತ ಒಂದು ವಾರಗಳ ಕಾಲ ನಡೆಯಲಿದೆ. ಬೀದಿ ನಾಟಕದ ಮುಖಾಂತರ ಭಯೋತ್ಪಾದನೆ, ಭ್ರಷ್ಟಾಚಾರ ಕುರಿತು ಮತದಾರರಲ್ಲಿ ತಿಳಿವಳಿಕೆ ಮೂಡಿಸಿ ಬಿಜೆಪಿ ಪರ ಮತದಾನ ಮಾಡಬೇಕೆಂದು ಅನಂತ್ ಯಾಚಿಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು












Click it and Unblock the Notifications