ತಾರಕಕ್ಕೇರಿದ ಬಿಜೆಪಿ-ಆಯೋಗದ ಜಗಳ
ನವದೆಹಲಿ, ಮಾ. 24 : ಪಿಲಿಭಿತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವರುಣ್ ಗಾಂಧಿ ಅವರ ಪ್ರಚೋದನಾಕಾರಿ ಭಾಷಣ ನಂತರ ಕೇಂದ್ರ ಚುನಾವಣಾ ಆಯೋಗದ ನಿರ್ಧಾರದಿಂದ ಉಂಟಾಗಿರುವ ವಿವಾದ ಮುಗಿಲು ಮುಟ್ಟಿದ್ದು ಭಾರತೀಯ ಜನತಾ ಪಕ್ಷ ಮತ್ತು ಚುನಾವಣಾ ಆಯೋಗದ ನಡುವೆ ಮಾತಿನ ಸಮರ ತಾರಕಕ್ಕೇರಿದೆ.
ಪ್ರಚೋದನಕಾರಿ ಹೇಳಿಕೆ ನೀಡಿರುವ ವರುಣ್ ಗಾಂಧಿಯನ್ನು ಕಣಕ್ಕಿಳಿಸಬೇಡಿ ಎಂದು ಆಯೋಗದ ಹೇಳಿಕೆಯಿಂದ ಕೆರಳಿರುವ ಬಿಜೆಪಿ ತನ್ನ ಪಟ್ಟು ಸಡಿಲಿಸದೇ ಇದ್ದದ್ದು, ಹಾಗೂ ಅವರ ಪರವಾಗಿ ನಾವೆಲ್ಲ ಪ್ರಚಾರಕ್ಕೆ ಹೋಗುತ್ತೇವೆ ಎಂದು ಬಿಜೆಪಿ ಮುಖಂಡರು ತಿರುಗೇಟು ನೀಡಿದ್ದಾರೆ. ಆಯೋಗ ಚುನಾವಣಾ ವಿಷಯದಲ್ಲಿ ಯಾವುದೇ ಪಕ್ಷದ ಪರವಾಗಿ ನಿಲ್ಲದೆ ತಟಸ್ಥವಾಗಿರುವುದು ಉಚಿತ. ತನ್ನ ವ್ಯಾಪ್ತಿ ಮೀರಿ ವರ್ತಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಕಿಡಿಕಾರಿದ್ದಾರೆ.
ಪಕ್ಷದ ವಕ್ತಾರ ಬಲ್ಬೀರ್ ಪುಂಜ್ ಮಾತನಾಡಿ, ಚುನಾವಣಾ ಆಯುಕ್ತ ನವೀನ ಚಾವ್ಲಾ ಅವರಿಗೂ ಕಾಂಗ್ರೆಸ್ ಪಕ್ಷಕ್ಕೂ ಮುಂಚಿನಿದಲೂ ಉತ್ತಮ ಸಂಬಂಧವಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ವ್ಯಂಗ್ಯವಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಪಿತೂರಿ ಎಂದು ಅವರು ಹರಿಹಾಯ್ದಿದ್ದಾರೆ.
ರಾಜಕೀಯ ಒತ್ತಡದಿಂದ ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ. ನನ್ನ ವಿರುದ್ದವಿರುವ ಆರೋಪದ ಕುರಿತು ವಾದ ಮಂಡಿಸಲು ನ್ಯಾಯಯುತ ಅವಕಾಶ ನೀಡಲಿಲ್ಲ. ಸತ್ಯಾಂಶ ಖಚಿತಪಡಿಸಿಕೊಳ್ಳುವ ಯಾವುದೇ ರೀತಿಯ ಪ್ರಯತ್ನ ಮಾಡದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಸೋಮವಾರ ವರುಣ್ ಗಾಂಧಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ವರುಣ್ ಸ್ಪರ್ಧೆ ರದ್ದುಗೊಳಿಸಿ: ಮುಸ್ಲಿಂ ಸಂಘಟನೆ












Click it and Unblock the Notifications