ಸೋನಿಯಾ ಗಾಂಧಿಗೆ ಗೌಡರ ಕಿವಿಮಾತು
ಬೆಂಗಳೂರು, ಮಾ. 24 : ಸೋನಿಯಾ ಗಾಂಧಿಯವರೆ ತೃತೀಯ ರಂಗದ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಇದರ ಶಕ್ತಿ ಚುನಾವಣೆಯಲ್ಲಿ ತಿಳಿಯಲಿದೆ ಎಂದು ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ತಿರುಗೇಟು ನೀಡಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಕನಸು ಕಾಣುತ್ತಿರುವ ಯಾವ ಪಕ್ಷಗಳು ತೃತೀಯ ರಂಗವನ್ನು ಪರಿಗಣಿಸದಿರುವುದು ತರವಲ್ಲ ಎಂದರು. ಸೋನಿಯಾ ಗಾಂಧಿ ಅವರಿಗೆ ವಿನಯಪೂರ್ವಕವಾಗಿ ಒಂದು ಮನವಿ, ಲೋಕಸಭೆ ಚುನಾವಣೆಗಳು ನಡೆಯಬೇಕಿದೆ ಮತದಾರರನ್ನು ಸೆಳೆಯಲು ಸಮಾವೇಶದಲ್ಲಿ ತೃತೀಯ ರಂಗವನ್ನು ಕಡೆಗಣಿಸಿ ಮಾತನಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಒಂದೇ ಪಕ್ಷ ಸರ್ವಾನುಮತದಿಂದ ಅಧಿಕಾರದ ಗದ್ದುಗೆ ಏರುವುದು ಸದ್ಯದ ಪರಿಸ್ಥಿತಿಯಲ್ಲಿ ಆಗದ ಮಾತು. ಆದ್ದರಿಂದ ಸೋನಿಯಾ ಗಾಂಧಿ ಅವರು ತೃತೀಯ ರಂಗದ ವಿರುದ್ಧ ಆರೋಪ ಮಾಡುವಾಗ ತಮ್ಮ ಮಾತಿನ ಮೇಲೆ ನಿಗಾ ಇರಲಿ ಎಂದು ದೇವೇಗೌಡ ಎಚ್ಚರಿಸಿದ್ದಾರೆ. ಚುನಾವಣೆ ನಂತರ ಏನಾದರೂ ಆಗಬಹುದು ಎಂದು ಹೇಳಿಕೆ ನೀಡಿರುವ ಗೌಡರು, ಚುನಾವಣೆ ನಂತರ ಯಾವ ಪಕ್ಷದೊಂದಿಗೆ ಬೇಕಾದರೂ ಹೋಗುವ ಸಾಧ್ಯತೆಯನ್ನು ಈ ಹಿಂದೆ ನೀಡಿದ್ದಾರೆ.
ಸೋಮವಾರ ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಭಾರತ್ ನಿರ್ಮಾಣ ಸಮಾವೇಶದಲ್ಲಿ ಸೋನಿಯಾ ಗಾಂಧಿ ಅವರು ಬಿಜೆಪಿ ಹಾಗೂ ತೃತೀಯ ರಂಗದ ವಿರುದ್ಧ ಹರಿಹಾಯ್ದಿದ್ದರು. ತೃತೀಯ ರಂಗದಲ್ಲಿರುವ ಎಲ್ಲ ನಾಯಕರು ಪ್ರಧಾನಮಂತ್ರಿ ಅಭ್ಯರ್ಥಿಗಳು ಎಂದು ಸೋನಿಯಾ ಲೇವಡಿ ಮಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ಕೋಮುವಾದಿಗಳಿಗೆ ಮತ ನೀಡಬೇಡಿ, ಸೋನಿಯಾ












Click it and Unblock the Notifications