ಬೆಂ. ಗ್ರಾಮಾಂತರ ಜಿಪಂ ಅಧ್ಯಕ್ಷರಾಗಿ ಪ್ರಮೀಳಾ
ಬೆಂಗಳೂರು, ಮಾ. 20 : ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಪ್ರಮೀಳಾ ಗಿರಿಧರ್ ಅವರು ಆಯ್ಕೆಯಾಗಿದ್ದಾರೆ. ಮೊದಲು ಚುನಾವಣೆಗೆ ಎ. ಎಂ. ವೆಂಕಟೇಶ್, ಬಸವರಾಜು ಹಾಗೂ ಪ್ರಮೀಳಾ ಗಿರಿಧರ್ ಸೇರಿದಂತೆ ಒಟ್ಟು ಮೂವರು ಉಮೇದುವಾರಿಕೆಗೆ ಸಲ್ಲಿಸಿದ್ದರಾದರೂ ಬಸವರಾಜು ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದ ಕಾರಣ ಅಂತಿಮವಾಗಿ ಎ.ಎಂ. ವೆಂಕಟೇಶ್ ಹಾಗೂ ಪ್ರಮೀಳಾ ಗಿರಿಧರ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತು.
ವೆಂಕಟೇಶ್ ಅವರ ಪರವಾಗಿ 7 ಸದಸ್ಯರು, ಪ್ರಮೀಳಾ ಅವರ ಪರವಾಗಿ 11 ಸದಸ್ಯರು ಕೈ ಎತ್ತುವ ಮೂಲಕ ಮತವನ್ನು ಚಲಾಯಿಸಿ, ಪ್ರಮೀಳಾ ಗಿರಿಧರ್ ಅವರು ಅಧ್ಯಕ್ಷರಾಗಿ ಆಯ್ಕೆಯಾದರು. ಸರ್ಕಾರದ ಜನಪರ ಯೋಜನೆಗಳನ್ನು ಜನತೆಗೆ ಸಮರ್ಪಕವಾಗಿ ತಲುಪಿಸುವುದು ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸುವುದೇ ತಮ್ಮ ಮಹತ್ವಾಕಾಂಕ್ಷೆ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications