ಅಡ್ವಾಣಿ ಪ್ರಧಾನಮಂತ್ರಿ ಆಗಬೇಕು, ಉಮಾಭಾರತಿ
ನವದೆಹಲಿ, ಮಾ. 18 : ಭಾರತೀಯ ಜನಶಕ್ತಿ ಪಕ್ಷದ ಅಧ್ಯಕ್ಷೆ ಉಮಾಭಾರತಿ ಅವರು ಪ್ರಧಾನಿ ಹುದ್ದೆಗೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಆಡ್ವಾಣಿ ಸೂಕ್ತ ವ್ಯಕ್ತಿ. ಆಡ್ವಾಣಿ ಪ್ರಧಾನಿಯಾಗುವುದು ನನ್ನ ಬಯಕೆ ಕೂಡ ಎಂದು ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಈ ಹಿಂದೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಉಮಾಭಾರತಿ, ಆಡ್ವಾಣಿ ಜೊತೆಗಿನ ಮನಸ್ತಾಪದಿಂದ ಪಕ್ಷದ ತೊರೆದು ಭಾರತೀಯ ಜನಶಕ್ತಿ ಪಕ್ಷ ಕಟ್ಟಿದ್ದರು. ಇತ್ತೀಚೆಗಷ್ಟೇ ನಡೆದ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಚುನಾವಣಾ ಹೊಂದಾಣಿಕೆ ಮಾಡದೇ ತಮ್ಮ ಪಕ್ಷದಿಂದ ಪ್ರತ್ಯೇಕ ಅಭ್ಯರ್ಥಿಗಳನ್ನು ನಿಲ್ಲಿಸಿ ಭಾರಿ ಸೋಲು ಅನುಭವಿಸಿದ್ದರು. ತಿಕಂಗರ್ ಕ್ಷೇತ್ರದಿಂದ ಉಮಾಭಾರತಿ ಸೋಲುನುಭವಿಸಿ ಮುಖಭಂಗಕ್ಕೆ ಒಳಗಾಗಿದ್ದರು.
ಉಮಾಭಾರತಿ ಅವರು ಆಡ್ವಾಣಿಗೆ ಪತ್ರ ಮೂಲಕ ಸಂದೇಶ ಕಳುಹಿಸಿ " ಪ್ರಧಾನಮಂತ್ರಿ ಖುರ್ಚಿಯಲ್ಲಿ ನಿಮ್ಮನ್ನು ನೋಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ. ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಪರಾಭವಗೊಂಡ ನಂತರ ರಾಜಕೀಯದಲ್ಲಿ ಭದ್ರ ನೆಲೆ ಕಾಣಲು ಫೈರ್ ಬ್ರ್ಯಾಂಡ್ ಉಮಾಭಾರತಿ ಮತ್ತೆ ಬಿಜೆಪಿ ಸೇರಿದರೂ ಅಚ್ಚರಿಯಿಲ್ಲ. ರಾಜಕೀಯದಲ್ಲಿ ಏನು ಬೇಕಾದರು ಆಗಬಹುದು ಅಲ್ಲವೇ ?
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications