ಕಾಂಡನಕೊಲ್ಲಿಗೂ ಬಂತು ಉಪಗ್ರಹ ಆಧಾರಿತ ಶಿಕ್ಷಣ
ಮಡಿಕೇರಿ, ಮಾ. 7: ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ಶೈಕ್ಷಣಿಕ ಸೌಲಭ್ಯಗಳು ಕಲಿಕೆಗೆ ಪೂರಕ ವಾತಾವರಣದಲ್ಲಿನ ಅಂತರ ಇನ್ನೂ ಕಡಿಮೆಯಾಗಿಲ್ಲ. ದೇಶ ವಿದ್ಯುನ್ಮಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಎಷ್ಟೇ ಮುಂದುವರೆದರೂ ಗ್ರಾಮೀಣ ಮಕ್ಕಳಿಗೆ ಪ್ರಕೃತಿ ಜೊತೆಗಿನ ಒಡನಾಟದಲ್ಲಿನ ಕಲಿಕೆಯೇ ಹೆಚ್ಚು.
ಗ್ರಾಮೀಣ ಪ್ರದೇಶಕ್ಕೆ ಉತ್ತಮ ಗುಣಮಟ್ಟದ ಸೌಲಭ್ಯ ದೊರೆಯಬೇಕು. ಅಲ್ಲಿನ ಮಕ್ಕಳಿಗೂ ದೇಶದ ಆಗು ಹೋಗುಗಳ ಬಗ್ಗೆ ಅರಿವಿರಬೇಕು. ಮಾಹಿತಿ ತಂತ್ರಜ್ಞಾನದಿಂದ ಮಕ್ಕಳಿಗೆ ಗ್ರಾಮೀಣ ಪ್ರದೇಶದಲ್ಲಿನ ನಗರದಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ಒದಗಿಸಲು ಪ್ರಯತ್ನಿಸಬಹುದು ಎಂಬುದು ಹಲವರ ಚಿಂತನೆ.ಈ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹಲವು ರೀತಿಯ ಸಾಧನ ಸಲಕರಣೆಗಳನ್ನು ಕಂಡು ಹಿಡಿದು ಅವುಗಳನ್ನು ಗ್ರಾಮೀಣ ಪ್ರದೇಶದ ಮಕ್ಕಳ ಬೌದ್ದಿಕ ಅಭಿವೃದ್ಧಿಗೆ ಬಳಸಲಾಗುತ್ತಿದೆ.
ಗ್ರಾಮೀಣ ಪ್ರದೇಶದ ಶಾಲಾ ಕಾಲೇಜುಗಳಿಗೆ ಉಪಗ್ರಹ ನಿಯಂತ್ರಕ ಎಜುಸ್ಯಾಟ್ (ಉಪಗ್ರಹ ಆಧಾರಿತ ಶಿಕ್ಷಣ) ಸೌಲಭ್ಯದ ಮೂಲಕ ಶಾಲಾ ಪಠ್ಯ ಚಟುವಟಿಕೆಗಳ ಬಗ್ಗೆ ಮಕ್ಕಳಿಗೆ ಮನದಟ್ಟಾಗುವಂತೆ ಕಲಿಸಲು ಇದರಿಂದ ಅನುಕೂಲವಾಗಲಿದೆ.
ಜಿಲ್ಲೆಯಲ್ಲಿ ಮಡಿಕೇರಿ ತಾಲ್ಲೂಕಿನ ಕಾಂಡನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಸ್ರೋ ನೆರವಿನ ಎಜುಸ್ಯಾಟ್ ಸಾಧನಗಳು ದೊರೆತಿದ್ದು, ಶಾಲೆಯ ಮಕ್ಕಳ ಕಲಿಕೆಗೆ ಹೊಸ ಅವಕಾಶಗಳು ತೆರೆದುಕೊಂಡಿವೆ. ಈ ಎಜುಸ್ಯಾಟ್ ಸೌಲಭ್ಯದಿಂದಾಗಿ ಮಕ್ಕಳು ಟಿ.ವಿ.ಮೂಲಕ ಕನ್ನಡ, ಹಿಂದಿ, ಇಂಗ್ಲೀಷ್, ಭಾಷೆಗಳ ಬಗ್ಗೆ ಹಾಗೂ ಸರಳವಾಗಿ ಗಣಿತ, ವಿಜ್ಞಾನ ಆವಿಷ್ಕಾರಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಕಳೆದ ಫೆ.25 ರಂದು ಇಸ್ರೋ ಸಂಸ್ಥೆಯ ಸಾಧನಗಳು ಶಾಲೆಯ ಮಡಿಲು ಸೇರಿವೆ. ಇದನ್ನು ಮಕ್ಕಳು ಸಹ ಕುತೂಹಲದಿಂದ ನೋಡುತ್ತಿದ್ದಾರೆ. ಶಾಲೆ ಆವರಣದಲ್ಲಿ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿ ಅದರಿಂದ ವಿದ್ಯುತ್ ಪಡೆದು ಸೆಟ್ ಟಾಫ್ ಬಾಕ್ಸ್ ಹಾಗೂ ಟಿ.ವಿ.ಮೂಲಕ ಮಕ್ಕಳಿಗೆ ಕಲಿಸುವ ಕಾರ್ಯ ನಡೆಯುತ್ತಿದ್ದು, ಗ್ರಾಮೀಣ ಪ್ರದೇಶದ ಮಕ್ಕಳ ಪಾಲಿಗೆ ಇದೊಂದು ಅತ್ಯಂತ ಅನುಕೂಲಕರವಾದ ವ್ಯವಸ್ಥೆಯಾಗಿದೆ ಎನ್ನುತ್ತಾರೆ. ಶಾಲೆಯ ಮುಖ್ಯ ಶಿಕ್ಷಕಿ ಡಿ.ಸಿ.ಪೊನ್ನಮ್ಮ. ಕಾಂಡನಕೊಲ್ಲಿ ಗ್ರಾಮದ ದುರ್ಗಾದೇವಿ ಕಾಫಿ ಎಸ್ಟೇಟ್ನ ಮಾಲಿಕರಾದ ಕಿಟ್ಟಿ ದೇವಯ್ಯ ಅವರ ಪ್ರಯತ್ನದ ಫಲವಾಗಿ ಶಾಲೆಗೆ ಈ ಸೌಲಭ್ಯ ದೊರೆತಿದ್ದು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಎಜುಸ್ಯಾಟ್ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗುವುದರ ಜೊತೆಗೆ ತಂತ್ರಜ್ಞಾನದ ಬಗ್ಗೆ ಜಗತ್ತಿನ ಆಗುಹೋಗುಗಳ ಬಗ್ಗೆ ಸ್ಥಳೀಯವಾಗಿ ತಿಳಿಯಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳ ಜ್ಞಾನಾಭಿವೃದ್ಧಿಗೆ ಸಹಕಾರಿಯಾಗಲು ಪ್ರಥಮ ಬಾರಿಗೆ ಕೊಡಗು ಜಿಲ್ಲೆಯ ಕಾಂಡನಕೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಟೆಲಿ ಎಜುಕೇಷನ್ನ್ನು ಸ್ಯಾಟಲೈಟ್ ಮೂಲಕ ಪ್ರಸಾರ ಮಾಡಲಾಗುತ್ತಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications