ಕರ್ನಾಟಕದಲ್ಲಿ ಏ.23 ಹಾಗೂ 30 ರಂದು ಚುನಾವಣೆ
ಬೆಂಗಳೂರು, ಮಾ. 2 : ಕೇಂದ್ರ ಚುನಾವಣೆ ಆಯೋಗವು ಇಂದು ಲೋಕಸಭೆ ಚುನಾವಣೆಗಳ ದಿನಾಂಕಗಳನ್ನು ಘೋಷಿಸಿದ್ದು, ಐದು ಹಂತದಲ್ಲಿ ಮತದಾನ ನಡೆಸಲು ನಿರ್ಧರಿಸಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಸಲಾಗುತ್ತಿದ್ದು, ಏಪ್ರಿಲ್ 23 ರಂದು 17 ಕ್ಷೇತ್ರಗಳಲ್ಲಿ ಮತ್ತು 30 ರಂದು 11 ಕ್ಷೇತ್ರಗಳಲ್ಲಿ ಮತದಾನ ನಡೆಸಲಿದೆ. ಇದರ ಜೊತೆಗೆ ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಹೇಳಿದೆ. ಏಪ್ರಿಲ್ 23 ರಂದು ಬೀದರ್ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಏಪ್ರಿಲ್ 23 ರಂದು ನಡೆಯಲಿರುವ ಕ್ಷೇತ್ರಗಳ ವಿವರ
ಬೆಳಗಾವಿ, ರಾಯಚೂರು, ಚಿಕ್ಕೋಡಿ, ಕೊಪ್ಪಳ, ಬಳ್ಳಾರಿ, ಉತ್ತರ ಕನ್ನಡ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ,ಹಾವೇರಿ, ಬೀದರ್, ಗುಲ್ಬರ್ಗಾ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ,
ಏಪ್ರಿಲ್ 30 ರಂದು ನಡೆಯಲಿರುವ ಕ್ಷೇತ್ರಗಳ ವಿವರ
ಧಾರವಾಡ, ಹಾಸನ, ಬಾಗಲಕೋಟೆ, ದಾವಣಗೆರೆ, ಶಿವಮೊಗ್ಗ, ಮಂಡ್ಯ, ಬಿಜಾಪುರ, ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ
22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು, ಯಡಿಯೂರಪ್ಪ
ಅತ್ತ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಆಡಳಿತ ಪಕ್ಷದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ಸರ್ಕಾರ ಲೋಕಸಭೆ ಚುನಾವಣೆಗೆ ಸಿದ್ಧವಾಗಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ 22 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಖಚಿತ ಎಂದು ಅವರು ವಿಶ್ವಾಸದಿಂದ ಹೇಳಿದರು. ಇಂದಿನಿಂದಲೇ ಪ್ರಚಾರ ಕಾರ್ಯ ಆರಂಭಿಸುವುದಾಗಿ ಅವರು ಹೇಳಿದರು.
ವರ್ಗಾವಣೆ ದಂಧೆ ತಡೆಗೆ ಡಿಕೆಶಿ ಆಗ್ರಹ
ಲೋಕಸಭೆ ಚುನಾವಣೆಗಳ ದಿನಾಂಕ ಪ್ರಕಟವಾದ ಹಿನ್ನೆಲೆಯಲ್ಲಿ ಅನುಕೂಲಸ್ಥ ಅಧಿಕಾರಿಗಳನ್ನು ವಿವಿಧ ಕ್ಷೇತ್ರಗಳಿಗೆ ವರ್ಗಾವಣಿ ಮಾಡಲು ಮುಂದಾಗಿದೆ. ಇದರ ಪಟ್ಟಿ ಈಗಾಗಲೇ ತಯಾರಾಗಿದೆ. ನೀತಿ ಸಂಹಿತೆ ಜಾರಿ ಬಂದಿರುವುದರಿಂದ ಯಾವ ಕಾರಣಕ್ಕೂ ವರ್ಗಾವಣೆ ಮಾಡಕೂಡದು. ಇದಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿ ಕಲೆ ಹಾಕಿ ಚುನಾವಣಾ ಆಯೋಗ ಮನವಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಸರ್ವಸನ್ನದ್ದವನಾಗಿದೆ. ಏಪ್ರಿಲ್ 5 ಅಥವಾ 6ಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ, ಐದು ಹಂತದಲ್ಲಿ ಮತದಾನ
ಸೈಕಲ್ ಹಿಡಿದ ಕೈ, ಎನ್ ಡಿಎ ತೆಕ್ಕೆಗೆ ಆರ್ಎಲ್ ಡಿ












Click it and Unblock the Notifications