ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಲು ಶೆಟ್ಟರ್ ಕರೆ
ಹುಬ್ಬಳ್ಳಿ, ಫೆ. 22 : ಯಾವುದೇ ಸಂಸ್ಥೆ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಅಭಿವೃಧ್ಧಿ ಪಥದಲ್ಲಿ ಸಾಗಿದಾಗ ಕಾರ್ಯ ನಿರ್ವಹಿಸುವ ಸಿಬ್ಬಂದಿ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ . ಆದುದರಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ದಕ್ಷತೆ , ನಿಯಮಿತ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ನಷ್ಟದಲ್ಲಿ ಸಾಗುತ್ತಿರುವುದನ್ನು ತಪ್ಪಿಸಲು ಪ್ರಯತ್ನಿಸಬೇಕು ಎಂದು ರಾಜ್ಯ ವಿಧಾನಸಭಾಧ್ಯಕ್ಷ ಜಗದೀಶ ಶೆಟ್ಟರ ಕರೆ ನೀಡಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಜರುಗಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಧಿಕಾರಿಗಳ ಮತ್ತು ನೌಕರರ ಕ್ಷೇಮಾಭಿವೃಧ್ಧಿ ಸಂಘದ ರಾಜ್ಯ ಮಟ್ಟದ ಎರಡನೇ ಮಹಾಸಮ್ಮೇಳನವನ್ನು ಉದ್ಘಾಟಿಸಿ ಸಂಘದ ಮನವಿಯನ್ನು ಸ್ವೀಕರಿಸಿ ಮಾತನಾಡುತ್ತಿದ್ದರು . ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಕಳೆದ ಹತ್ತು ವರ್ಷಗಳಲ್ಲಿ 260 ಕೋಟಿ ರೂ. ಗಳ ನಷ್ಟ ಅನುಭವಿಸಿದೆ . ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆ ಕೂಡಾ ನಷ್ಟದಲ್ಲಿದೆ . ಈ ಪರಿಸ್ಥಿತಿಯನ್ನು ಬದಲಾಯಿಸಲು ತಾವು ರಾಜ್ಯದ ಮುಖ್ಯಮಂತ್ರಿಗಳಿಗೆ , ಸಾರಿಗೆ ಸಚಿವರಿಗೆ ಪತ್ರ ಬರೆದು 200 ಕೋಟಿ ರೂ. ಅನುದಾನಕ್ಕೆ ಆಗ್ರಹಿಸಿದ್ದು ಬಜೆಟ್ದಲ್ಲಿ 25 ಕೋಟಿ ರೂ. ಅನುದಾನವನ್ನು ವಾಯುವ್ಯ ಸಾರಿಗೆ ಸಂಸ್ಥೆ ನೀಡಲಾಗಿದೆ ಎಂದರು.
ಇನ್ನು 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಲು ತಾವು ಹಾಗೂ ಈ ಭಾಗದ ಶಾಸಕ ಮಿತ್ರರೆಲ್ಲ ಕೂಡಿ ಪ್ರಯತ್ನಿಸುವುದಾಗಿ ಶೆಟ್ಟರ ಹೇಳಿದರು. ಸಂಘದ ಬೇಡಿಕೆಗಳೆಲ್ಲ ನ್ಯಾಯಮತವಾಗಿದ್ದು ಅವುಗಳ ಪರಿಹಾರ ಕುರಿತಂತೆ ಸಾರಿಗೆ ಸಚಿವರೊಡನೆ ತಾವು ಚರ್ಚಿಸುವುದಾಗಿ ತಿಳಿಸಿದ ವಿಧಾನಸಭಾಧ್ಯಕ್ಷರು ಸಾರಿಗೆ ಸಂಸ್ಥೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಎಲ್ಲರೂ ಒಗ್ಗೂಡಿ ಅಭಿವೃಧ್ಧಿ ಪಥದತ್ತ ಸಂಸ್ಥೆಯು ಸಾಗುವಂತೆ ಶ್ರಮವಹಿಸುವ ಅಗತ್ಯ ಒತ್ತಿ ಹೇಳಿದರು .
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications