ನೈಸ್ ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಾಧೀಶ
ನವದೆಹಲಿ, ಫೆ. 10 : ನೈಸ್ ಯೋಜನೆಯಲ್ಲಿ ನ್ಯಾಯಾಲಯಕ್ಕೆ ಪತ್ರ ಬರೆದು ಸರ್ವೋಚ್ಚ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದ ಜನತಾದಳ ವರಿಷ್ಠ ಎಚ್ ಡಿ ದೇವೇಗೌಡ ಸೋಮವಾರ ನ್ಯಾಯಾಧೀಶರ ವಿರುದ್ದ ಮತ್ತೊಂದು ದಾಳ ಉರುಳಿಸಿದ್ದಾರೆ.
ನೈಸ್ ವಿಚಾರಣೆಯಿಂದ ನ್ಯಾ.ಅರಿಜಿತ್ ಪಸಾಯತ್ ಹಿಂದೆ ಸರಿಯಬೇಕು ಎಂದು ಅವರಿದ್ದ ಪೀಠಕ್ಕೆ ಗೌಡರು ಮನವಿ ಸಲ್ಲಿಸಿದರು. ನ್ಯಾಯಮೂರ್ತಿ ಪಸಾಯತ್ ಅವರು ಪಕ್ಷಪಾತಿ ಮತ್ತು ಪೂರ್ವಗ್ರಹ ಪೀಡಿತರು ಎ೦ದು ಅವರ ವಿರುದ್ಧ ಗೌಡರು ಅನುಮಾನ ವ್ಯಕ್ತಪಡಿಸಿದರು. ಈ ಅರ್ಜಿಯಿಂದ ನೊಂದ ಪಸಾಯತ್ ತಾವು ನೈಸ್ ವಾಜ್ಯದ ವಿಚಾರಣೆಯಿಂದ ಭಾರ ಮನಸ್ಸಿನೊಂದಿಗೆ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದರು. ಪಸಾಯತ್ ಈ ಕೇಸ್ ಗಳಿಂದ ಹಿಂದೆ ಸರಿಯುವುದರೊಂದಿಗೆ ಲೋಕಾಯುಕ್ತ ತನಿಖೆ ನಡೆಸಲು ಈಗ ಯಾವ ಅಡ್ಡಿಯೂ ಇಲ್ಲದಂತಾಗಿದೆ.
ನನಗೂ ನೈಸ್ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ. ನನ್ನ ವ್ರತ್ತಿಜೀವನದ ಕಡೇ ದಿನಗಳಲ್ಲಿ ನನ್ನ ವಿರುದ್ದ ಗೌಡರ ಆರೋಪ ಬಹಳ ನೋವು ತಂದಿದೆ ಎಂದು ನ್ಯಾ. ಪಸಯತ್ ವಿಷಾದ ವ್ಯಕ್ತಪಡಿಸಿದರು. ಮುಂಬರುವ ಮೇ ತಿಂಗಳಲ್ಲಿ ಪಸಾಯತ್ ನಿವೃತ್ತಿಯಾಗಲಿದ್ದಾರೆ.
ಈ ಬೆಳವಣಿಗೆಯೊಂದಿಗೆ ದೇವೇಗೌಡ ಮತ್ತು ಅಶೋಕ್ ಖೇಣಿ ಅವರ ನೈಸ್ ನಡುವಣ ಕಾನೂನು ಕದನ ಹೊಸ ಮಜಲು ಮುಟ್ಟಿದ೦ತಾಗಿದೆ. ನೈಸ್ ಕಂಪನಿಯ ಬೆಂಗಳೂರು-ಮೈಸೂರು ಕಾರಿಡಾರ್ ಯೋಜನೆಗೆ ಅಡಚಣೆ ಒಡ್ಡುತ್ತಿರುವುದಾಗಿ ರಾಜ್ಯ ಸರಕಾರ ಮತ್ತು ನ್ಯಾಯಾಲಯಗಳಿಂದ ದೇವೇಗೌಡರು ಹಲವು ಬಾರಿ ಛೀಮಾರಿ ಹಾಕಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ನೈಸ್ ಪತ್ರ ಪ್ರಕರಣ, ಮೆತ್ತಗಾದ ದೇವೇಗೌಡ












Click it and Unblock the Notifications