ನಿತ್ಯ ಯೋಗಾಭ್ಯಾಸ ಮಾಡಿ: ಮುರುಘ ಮಠಾಧೀಶ
ಮಡಿಕೇರಿ, ಫೆ. 10 : ಮಾನವನಲ್ಲಿ ದುರ್ಗುಣ ನಿರ್ಗಮನವಾಗಬೇಕು, ಸದ್ಗುಣ ಬೆಳೆಯಬೇಕು. ಭಾವ ಬಯಲಾಗಬೇಕು, ಬಯಲು ಭಾವವಾಗಬೇಕು, ಆಗ ಬದುಕು ಆನಂದಮಯವಾಗುತ್ತದೆ. ಒತ್ತಡ ಕಡಿಮೆಯಾಗುತ್ತಾ ಸಾಗುತ್ತದೆ ಎಂದು ಚಿತ್ರದುರ್ಗದ ಮುರುಘರಾಜೇಂದ್ರ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗಾಗಿ ಏರ್ಪಡಿಸಲಾಗಿದ್ದ ಒತ್ತಡ ರಹಿತ ಕೆಲಸ ನಿರ್ವಹಣೆ ಮತ್ತು ಸಮಾಜಮುಖಿ ಬದುಕು ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಮುರುಘರಾಜೇಂದ್ರ ಶ್ರೀಗಳು, ಆಧುನಿಕ ಜಗತ್ತು ಆತಂಕದ ಅವಸರದ ಜಗತ್ತಾಗಿದೆ. ಇದು ಒತ್ತಡದ ಬದುಕಿಗೆ ದಾರಿ ಮಾಡಿಕೊಡುತ್ತಿದೆ ಎಂದರು.
ಭಾರತ ಜಗತ್ತಿಗೆ ಶಾಂತಿ ಸಂದೇಶವನ್ನು ಬೋಧಿಸಿದ ದೇಶ. ಆದರೆ, ಇಂದು ನಮ್ಮ ನಡುವೆ ಅತೀ ಒತ್ತಡದ ಬದುಕಿನಿಂದ ಅಶಾಂತಿ ಸೃಷ್ಠಿಯಾಗುತ್ತಿದೆ. ಆಧ್ಯಾತ್ಮಿಕ ಆನಂದದಿಂದ ಒತ್ತಡ ಮತ್ತು ಅಶಾಂತಿಯನ್ನು ಕಡಿಮೆ ಮಾಡಲು ಸಾಧ್ಯ ಎಂದು ಸ್ವಾಮೀಜಿ ಹೇಳಿದರು. ಪ್ರತಿಭೆ, ಪರಿಶ್ರಮ, ಪ್ರಾಮಾಣಿಕತೆ, ಪ್ರಗತಿಗೆ ಸೋಪಾನ. ಈ ದಿವ್ಯಮಂತ್ರ ಎಂದೂ ಮರೆಯಬೇಡಿ ಎಂದು ಅವರು ಕಿವಿಮಾತು ಹೇಳಿದರು.
ದುಡಿಮೆಯಲ್ಲಿ ದೇವರ ಕಾಣಬೇಕು. ನಮ್ಮನ್ನು ಸದಾ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕು. ಇಷ್ಟಪಟ್ಟು ಮಾಡಿದ ಕೆಲಸ ಕಷ್ಟವೆನಿಸದು. ಅಧಿಕಾರದ ಅಹಂಕಾರ ಬಿಟ್ಟು ಪ್ರಜಾ ಸೇವೆಯಲ್ಲಿ ಸಾರ್ಥಕತೆ ಕಾಣಬೇಕು ಎಂದು ಸ್ವಾಮೀಜಿ ನುಡಿದರು. ಕೆಲಸ ಆರಂಭಿಸುವ ಮುನ್ನ ಸ್ಪಷ್ಟ ಗುರಿ ಇರಲಿ, ಕಾಲ ಬದ್ದ ಕೆಲಸ ಅನಗತ್ಯ. ಒತ್ತಡ ನಿವಾರಿಸುತ್ತದೆ. ಅದೇ ರೀತಿ ಯಾವಾಗಲೂ ಆದ್ಯತೆಗಳ ಪಟ್ಟಿ ತಯಾರಿಸಿಕೊಂಡು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿ ಎಂದು ಮುರುಘ ಶ್ರೀ ಸಲಹೆ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications