ಮಂಗಳೂರು ಶಾಸಕರ ಪುತ್ರಿ ಅಪಹರಣ 5 ಬಂಧನ
ಮಂಗಳೂರು, ಫೆ. 8 : ಕೇರಳದ ಮಂಜೇಶ್ವರ ಶಾಸಕ ಸಿ ಎಚ್ ಕುಇಂಬು ಅವರ ಪುತ್ರಿ ಶ್ರುತಿ ಮತ್ತು ಆಕೆಯ ಸ್ನೇಹಿತೆಯ ತಮ್ಮ ಶಬೀಬಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಮಂದಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿಗ್ದಾರೆ.
ಬಂಧಿತರು ಮಂಜೇಶ್ವರ ಆಸುಪಾಸಿನವರಾದ ಖಾಸಗಿ ಬಸ್ಸಿನ ಟೈಂ ಕೀಪರ್ ರಾಜು ಅಲಿಯಾಸ್ ರಾಜೇಶ್ (30) ಮೆಕ್ಯಾನಿಕ್ ರಂಜಿತ್ (35) ಬಸ್ಸಿನ ಚಾಲಕ ಅರವಿಂದ ದಾಸ್ (30), ಚಾಲಕ ಸತೀಶ್ (30) ಹಾಗೂ ಮಂಗಳೂರು ಪ್ರಕಾಶ್ (30) ಎಂದು ಗುರುತಿಸಲಾಗಿದೆ. ಪ್ರಕರಣದ ಆರೋಪಿಗಳ ಬಂಧನ ವಿಷಯವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್, ಘಟನೆಯ ಹಿಂದಿನ ಉದ್ದೇಶ, ಆರೋಪಿಗಳನ್ನು ಯಾವುದಾದರೂ ಸಂಘಟನೆಯ ಅಥವಾ ರಾಜಕೀಯ ಪಕ್ಷದ ಸದಸ್ಯರೆ ಎಂಬದನ್ನು ಇನ್ನಷ್ಟೆ ವಿಚಾರಣೆಗೆ ಒಳಪಡಿಸಬೇಕಾಗಿದೆ. ಈ ಕೃತ್ಯದ ಹಿಂದಿನ ಪ್ರೇರಕರು ಯಾರು ಎಂಬುದು ಕೂಡ ವಿಚಾರಣೆಯಿಂದ ತಿಳಿಯಬೇಕಿದೆ ಎಂದರು.
ಕೃತ್ಯದ ಹಿಂದೆ ತಮ್ಮ ಪಾತ್ರವನ್ನು ಸ್ಥಳೀಯ ಸಂಘಟನೆಗಳು (ಬಜರಂಗದಳ, ಶ್ರೀರಾಮಸೇನೆ) ನಿರಾಕರಿಸಿವೆ. ಆದರೆ ಮೆಲ್ನೋಟಕ್ಕೆ ಆರೋಪಿಗಳು ಯಾವುದೇ ಸಂಘಟನೆಯ ಸದಸ್ಯರಂತೆ ಕಂಡುಬರುತ್ತಿಲ್ಲ ಎಂದರು. ಶ್ರುತಿಯನ್ನು ಬಸ್ಸಿನಿಂದ ಇಳಿಸಿ ಕರೆದುಕೊಂಡು ಹೋಗಿರುವ ಆಟೋ ಪತ್ತೆಯಾಗಿಲ್ಲ ಎಂದು ಎಸ್ಪಿ ಸತೀಶ್ ಕುಮಾರ್ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)
ಶ್ರುತಿ ಪ್ರಕರಣದಲ್ಲಿ ಸೇನೆ ಕೈವಾಡವಿಲ್ಲ : ಮುತಾಲಿಕ್












Click it and Unblock the Notifications