ಗೌಡರ ಸೊಸೆ ಭವಾನಿ ರೇವಣ್ಣ ರಾಜಕೀಯಕ್ಕೆ
ಬೆಂಗಳೂರು, ಫೆ. 6 : ಬಹುಶಃ ದೇಶದಲ್ಲಿ ಇದು ಮೊದಲು ಎನ್ನಬಹುದೇನೂ, ಒಂದೇ ಕುಟುಂಬದ ಅಷ್ಟೂ ಮಂದಿ ರಾಜಕಾರಣಕ್ಕೆ ಇಳಿಯುವುದು ಸುಮ್ಮನೇ ಮಾತಲ್ಲ. ರಾಜ್ಯ ರಾಜಕೀಯದಲ್ಲಿ ಪ್ರತಿಷ್ಠೆಯ ಕುಟುಂಬ ಎಂದೇ ಪರಿಗಣಿಸಲ್ಪಟ್ಟಿರುವ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಪುತ್ರ ಎಚ್ ಡಿ ರೇವಣ್ಣ ಅವರ ಧರ್ಮಪತ್ನಿ ಭವಾನಿ ರೇವಣ್ಣ ಸಕ್ರಿಯ ರಾಜಕೀಯಕ್ಕೆ ದುಮುಕಲು ತಾಲೀಮು ನಡೆಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭವಾನಿ ಅವರು ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ದೇವೇಗೌಡರ ಕುಟುಂಬದ ಪ್ರತಿ ಸದಸ್ಯರನ್ನೂ ದಕ್ಷಿಣ ಕರ್ನಾಟಕದ ಜನ ಕೈಬಿಡಲ್ಲ ಎನ್ನುವುದಕ್ಕೆ ಇತ್ತೀಚೆಗೆ ನಡೆದ ಉಪಚುನಾವಣೆಯೇ ಸಾಕ್ಷಿ. ಮಧುಗಿರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ ಅವರು ಕೆ ಎನ್ ರಾಜಣ್ಣ, ಸಿ ಚೆನ್ನಿಗಪ್ಪನಂತಹ ಘಟಾನುಘಟಿಗಳನ್ನು ಮಣ್ಣುಮುಕ್ಕಿಸಿರುವುದು ಗೊತ್ತಿರುವ ಸಂಗತಿ.
ಇದರಿಂದ ಉತ್ತೇಜಿತರಾಗಿರುವ ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರು ತಾವೂ ಕೂಡ ಚುನಾವಣಾ ಸ್ಪರ್ಧೆಗೆ ಫಿಟ್ ಎಂದೆನ್ನುವ ಅಫಿಡ್ ವಿಟ್ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ, ಜೆಡಿಎಸ್ ಹೈಕಮಾಂಡ್ ಇನ್ನೂ ಹಸಿರು ನಿಶಾನೆ ತೋರಿಸಿಲ್ಲ. ಆದರೂ ಕೆ ಆರ್ ನಗರ ತಾಲ್ಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ಬುಧವಾರ ಹಿರಿ ನಾಲೆಯ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭವಾನಿ ರೇವಣ್ಣ, ಮೈಸೂರು ಜಿಲ್ಲೆ ಕೆ ಆರ್ ನಗರ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿಯುವ ಸೂಚನೆ ನೀಡಿದ್ದಾರೆ.
ಕೆ ಆರ್ ನಗರ ಕ್ಷೇತ್ರದ ಬಹುತೇಕ ಕಾರ್ಯಕರ್ತರು ಮತ್ತು ಜನತೆ ವಿಧಾನಸಭಾ ಚುನಾವಣೆಗೆ ನಿಲ್ಲುವಂತೆ ಒತ್ತಡ ತರುತ್ತಿದ್ದಾರೆ. ಜೆಡಿಎಸ್ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಭವಾನಿ ಹೇಳಿದರು. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಹತ್ತು ಹಲವು ಕ್ಷೇತ್ರದ ಕೆಲಸವನ್ನು ನಾನು ಮಾಜಿ ಸಚಿವ ರೇವಣ್ಣ ಅವರಿಂದ ಮಾಡಿಸಿರುವೆ. ಇದನ್ನು ಕ್ಷೇತ್ರದ ಜನತೆ ಮರೆತಿಲ್ಲ. ಜತೆಗೆ ನಿಮ್ಮ ಋಣವನ್ನು ತೀರಿಸುತ್ತೇವೆ. ಚುನಾವಣೆಗೆ ಸ್ಪರ್ಧಿಸುವಂತೆ ಭಾರಿ ಒತ್ತಡ ತರುತ್ತಿದ್ದಾರೆ ಎಂದು ಭವಾನಿ ಹೇಳಿದರು.
ಟಿಪ್ಪಣಿ:ಜೆಡಿಎಸ್ ನ ಸಾ ರಾ ಮಹೇಶ್ ಅವರು ಮೈಸೂರು ಜಿಲ್ಲೆಯ ಕೃಷ್ಣರಾಜನಗರ(ಕೆ.ಆರ್ ನಗರ) ಕ್ಷೇತ್ರದ ಹಾಲಿ ಶಾಸಕರು.
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ, ವಿವಿಧ ಪಕ್ಷಗಳ ಸಭೆ












Click it and Unblock the Notifications