ಎಟಿಎಸ್ ಪೊಲೀಸರಿಂದ ಮುತಾಲಿಕ್ ವಿಚಾರಣೆ
ಮಂಗಳೂರು, ಜ. 31 : ಮಾಲೆಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ನಾಯಕ ಪ್ರಮೋದ್ ಮುತಾಲಿಕ್ ಅವರನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ದ ಪೊಲೀಸ್ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದರು.
ಮಾಲೆಗಾಂವ್ ಪ್ರಕರಣದ ಪ್ರಮುಖ ಆರೋಪಿ ಲೆ.ಕ.ಪ್ರಸಾದ್ ಪುರೋಹಿತ್ ಅವರು ಮುತಾಲಿಕ್ ಹೆಸರನ್ನು ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಅವರನ್ನು ವಿಚಾರಣೆಗೆ ಗುರಿಪಡಿಸಿದರು. ಎಟಿಎಸ್ ಅಧಿಕಾರಿಗಳಾದ ವಾಘವೆ ಪಾಟೀಲ್ ಮತ್ತು ಸಯ್ಯದ್ ವಿಚಾರಣೆ ನಡೆಸಿದರು.
ಆದರೆ, ಪ್ರಮೋದ್ ಅವರು ತಮಗೂ ಮಾಲೆಗಾಂವ್ ಸ್ಫೋಟಕ್ಕೂ ಯಾವುದೇ ಸಂಬಂಧವಿಲ್ಲ. ಪುರೋಹಿತ್ ಪ್ರಸ್ತಾಪಿಸಿರುವ ಹೆಸರು ಪ್ರವೀಣ್ ಮುತಾಲಿಕ್. ಆ ಪ್ರವೀಣ್ ಮುತಾಲಿಕ್ ಯಾರಂತ ಗೊತ್ತೇ ಇಲ್ಲ ಎಂದು ಪ್ರಮೋದ್ ಸ್ಪಷ್ಟಪಡಿಸಿದರು.
ಪಬ್ ಪ್ರಕರಣ, ಬಂಧಿತ ಆರೋಪಿಗಳಿಗೆ ಜಾಮೀನು : ಜನವರಿ 24ರಂದು ಮಂಗಳೂರಿನ ಅಮ್ನೇಶಿಯಾ ಪಬ್ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಪ್ರಮೋದ್ ಮುತಾಲಿಕ್ ಸೇರಿದಂತೆ ಬಂಧಿತರಾಗಿದ್ದ 27 ಮಂದಿಯನ್ನು ಷರತ್ತುಬದ್ಧ ಜಾಮೀನ ಮೇಲೆ 3ನೇ ಜೆಎಮ್ಎಫ್ ಸಿ ನ್ಯಾಯಾಲಯ ಬಿಡುಗಡೆ ಮಾಡಿದೆ.
ಹುಡುಗಿಯರು ಅಶ್ಲೀಲವಾಗಿ ನರ್ತಿಸುತ್ತದ್ದರೆಂದು ಆರೋಪಿಸಿ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸರಿಗೆ ವಿಷಯ ತಿಳಿಸದೆ ಏಕಾಏಕಿ ದಾಳಿ ನಡೆಸಿ ಹುಡುಗಿಯರ ಮೇಲೆ ಹಲ್ಲೆ ನಡೆಸಿದ್ದರು. ಈ ಕೃತ್ಯಕ್ಕಾಗಿ ಕ್ಷಮೆ ಯಾಚಿಸಿರುವ ಪ್ರಮೋದ್ ಮುತಾಲಿಕ್ ಇನ್ನು ಮುಂದೆಯೂ ಪಬ್ ಸಂಸ್ಕೃತಿಯನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications