ಪರಿಸರ ಸ್ನೇಹಿ ಗಣಿಗಾರಿಕೆಯತ್ತ ಕುದುರೆಮುಖ
ಬೆಂಗಳೂರು, ಜ. 25: ಕುದುರೆಮುಖ ಅದಿರು ಕಂಪೆನಿ ಮತ್ತೆ ತಲೆ ಎತ್ತಲು ತವಕಿಸುತ್ತಿದೆ. ಮಂಗಳೂರಿನ ಘಟಕದ ಆಧುನೀಕರಣಕ್ಕಾಗಿ ಸುಮಾರು 800 ಕೋಟಿ. ರು ಹೂಡಲು ಮುಂದಾಗಿದೆ ಎಂದು ಕೆಐಒಸಿಎಲ್ ನ ಸಿಇಒ ಕೆ ರಂಗನಾಥ್ ಅವರು ತಿಳಿಸಿದ್ದಾರೆ. ಕುದುರೆಮುಖ ಐರನ್ ಓರ್ ಕಂಪೆನಿಗೆ ಈಗ ಕೆಐಒಸಿಎಲ್ ಎಂದು ಮರು ನಾಮಕರಣ ಮಾಡಲಾಗಿದೆ.
50 ಲಕ್ಷ ಟನ್ ಸಾಮರ್ಥ್ಯದಉಕ್ಕಿನ ಘಟಕವನ್ನು ಸುಮಾರು 9 ಸಾವಿರ ಕೋಟಿ ರು ವೆಚ್ಚದಲ್ಲಿ ನಿರ್ಮಿಸಲಾಗುವುದು. ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಈ ಘಟಕ ಸ್ಥಾಪನೆಯಾಗಲಿದ್ದು, ಈ ಬಗ್ಗೆ ಮಾತುಕತೆ ನಡೆಯುತ್ತಿದೆ. ಘಟಕ ಸ್ಥಾಪನೆಗೆ ಸೂಕ್ತ ಸ್ಥಳ ಗುರುತಿಸುವ ಕಾರ್ಯಕ್ಕ್ಕೆ ಚಾಲನೆ ನೀಡಲಾಗಿದೆ, ಸರ್ಕಾರದ ಅನುಮತಿ ಕೋರಲಾಗಿದೆ ಎಂದರು.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ, ಛತ್ತೀಸ್ ಗಢ ಹಾಗೂ ಒರಿಸ್ಸಾದಲ್ಲಿ ಅದಿರು ಗಣಿಗಾರಿಕೆ ನಡೆಸಲಾಗುತ್ತಿದೆ. ಕಳೆದ ನಾಲ್ಕು ವರ್ಷದಲ್ಲಿ ಸಂಸ್ಥೆ ಪ್ರತಿವರ್ಷ 300 ರಿಂದ 400 ಕೋಟಿ ರು ವಹಿವಾಟು ನಡೆಸುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ವಹಿವಾಟಿನ ಪ್ರಮಾಣ ಕುಸಿಯುವ ಸಾಧ್ಯತೆ ಇದೆ ಎಂದು ಹೇಳಿದರು. ಕಳೆದ ವರ್ಷ ಸಂಸ್ಥೆ 15 ಕೋಟಿ ರು ಲಾಭ ಗಳಿಸಿತ್ತು. ಈ ಬಾರಿ ಅದರಲ್ಲಿ ಶೇ. 50 ರಷ್ಟು ಕಡಿಮೆಯಾಗಬಹುದು ಎಂದು ರಂಗನಾಥ್ ಹೇಳಿದರು.
ಪರಿಸರ ಸ್ನೇಹಿ ಗಣಿಗಾರಿಕೆ: ಚಿಕ್ಕಮಗಳೂರು ಜಿಲ್ಲೆ ಕುದುರೆಮುಖದಲ್ಲಿ ಗಣಿಗಾರಿಕೆಗೆ ಮತ್ತೆ ಚಾಲನೆ ನೀಡುವ ಪ್ರಯತ್ನ ನಡೆದಿದೆ. ಅಲ್ಲಿನ ಪರಿಸರ ಹಾಗೂ ವನ್ಯಜೀವಿಗಳಿಗೆ ಹಾನಿಯಾಗದ ರೀತಿಯಲ್ಲಿ ಪರಿಸರ ಸ್ನೇಹಿಗಣಿಗಾರಿಕೆ ನಡೆಸಲು ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷಾ ವರದಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಿ, ಅನುಮತಿ ಪಡೆಯಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications