ಆರ್ಎಸ್ಎಸ್ ದೇಶದ್ರೋಹಿ ಸಂಘಟನೆ, ಕಾಂಗ್ರೆಸ್
ಬೆಳಗಾವಿ, ಜ. 20 : ಐದನೇ ದಿನದ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ನಾಯಕ ಟಿ ಬಿ ಜಯಚಂದ್ರ ಕಾನೂನು ಸುವ್ಯವಸ್ಥೆ ಕುರಿತಂತೆ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು. ಆಗ, ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ಶಾಸಕ ಅಭಯಚಂದ್ರ ಜೈನ್, ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಮಾತು ಮುಂದುವರೆಸಿದ ಜೈನ್, ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ಇಲ್ಲ. ರಾಜ್ಯದ ಗೃಹ ಇಲಾಖೆ ದೇಶದ್ರೋಹಿ ಸಂಘಟನೆಯಾದ ಆರ್ಎಸ್ಎಸ್ ಹಿಡಿತದಲ್ಲಿದೆ. ಗೃಹ ಇಲಾಖೆ ಎಲ್ಲ ನಿರ್ಣಯಗಳೂ ಆರ್ಎಸ್ಎಸ್ ಕಚೇರಿಯಿಂದಲೇ ನಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದರು. ಇದಕ್ಕೆ ಬಿಜೆಪಿ ಶಾಸಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಕೆಲ ಹೊತ್ತು ವಾಗ್ವಾದ, ಮಾತಿನ ಚಕಮಕಿ ನಡೆಯುತು. ಸದನದಲ್ಲಿ ಗದ್ದಲ, ಘೋಷಣೆ ಪ್ರತಿಭಟನೆ ಆರಂಭವಾಯಿತು.
ಕಾಂಗ್ರೆಸ್ ಶಾಸಕರು ಮಾಡಿದ ಆರೋಪವನ್ನು ತೀವ್ರವಾಗಿ ಖಂಡಿಸಿ ಬಿಜೆಪಿ ಕೆ ಎಸ್ ಈಶ್ವರಪ್ಪ, ರೇಣುಕಾಚಾರ್ಯ, ಸುರೇಶ್ ಕುಮಾರ್ ಸೇರಿದಂತೆ ಹಲವರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸತೊಡಗಿದರು. ನಾವೇನು ಕಡಿಮೆ ಇಲ್ಲ ಎಂದು ಸವಾಲು ಹಾಕಿದ ಕಾಂಗ್ರೆಸ್ಸಿಗರು ಕೂಡಾ ಟಿ ಬಿ ಜಯಜಂದ್ರ ನೇತೃತ್ವದಲ್ಲಿ ಧರಣಿ ಶುರು ಮಾಡಿದರು. ಸದನದಲ್ಲಿ ಜೈನ್ ಅವರ ಮಾತು ತೀವ್ರ ಕೋಲಾಹಲ ಸೃಷ್ಟಿಸಿತು.
ಪರಿಸ್ಥಿತಿ ಕೈಮೀರಿದ್ದನ್ನು ಅರಿತ ಸ್ಪೀಕರ್ ಜಗದೀಶ್ ಶೆಟ್ಟರ್ ಸದನವನ್ನು 10 ನಿಮಿಷ ಮುಂದೂಡಿದರು. 10 ನಿಮಿಷದ ನಂತರ ಆರಂಭವಾದ ಕಲಾಪದಲ್ಲಿ ಮತ್ತೆ ಕಾಂಗ್ರೆಸ್ ಮುಖಂಡರು ಸರ್ಕಾರದ ವಿರುದ್ಧ ಹಾಗೂ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. ಸೋಮವಾರ ಬಿಜೆಪಿ ಸಚಿವರು ಸದನದಲ್ಲಿ ರೌಡಿಗಳಂತೆ ವರ್ತಿಸಿದ್ದರು. ಇಂದು ಬಿಜೆಪಿ ಶಾಸಕರು ಕೂಡಾ ಅದೇ ದಾಟಿಯಲ್ಲಿ ಮುನ್ನೆಡೆಯುತ್ತಿದ್ದಾರೆ. ಹೀಗಾದರೆ ರಾಜ್ಯದ ಗತಿ ಏನು ಎಂದು ಜಯಚಂದ್ರ ಕಳವಳ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರು ಹಾಗೂ ಶಾಸಕರು ಸದನದಲ್ಲಿ ಹೇಗೆ ವರ್ತಿಸಿಬೇಕು ಎನ್ನುವುದನ್ನು ಕಲಿಸಿಬೇಕು ಎಂದು ಕಿವಿ ಮಾತು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಗಣಿ ಗದ್ದಲ ಸದನದಲ್ಲಿ ಕೋಲಾಹಲ












Click it and Unblock the Notifications