ಕೊಪ್ಪಳದಲ್ಲಿ ಬಿಜೆಪಿ ಮೇಲೆ ಜೆಡಿಎಸ್ ವಾಗ್ಬಾಣ
ಕೊಪ್ಪಳ, ಜ.17: ಜಾತ್ಯಾತೀತ ಜನತಾದಳ ಕೊಪ್ಪಳದಲ್ಲಿ ಆಯೋಜಿಸಿದ್ದ ಶೋಷಿತ ವರ್ಗಗಳ ಬೃಹತ್ ಸಮಾವೇಶಕ್ಕೆ ಉತ್ತ್ತರ ಕರ್ನಾಟಕದ 10 ಜಿಲ್ಲೆಗಳಿಂದ ಅಪಾರ ಜನಸ್ತೋಮ ಆಗಮಿಸಿತ್ತು. ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಜಮಾವಣೆಯಾಗಿದ್ದರು.
ಶೋಷಿತ ವರ್ಗದ ಬೃಹತ್ ಸಮಾವೇಶದ ಅಂಬೇಡ್ಕರ ವೇದಿಕೆ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಪಕ್ಷದ ವಿರುದ್ಧ ಸಮರ ಸಾರಿದರು. ಆಪರೇಷನ್ ಕಮಲದ ದುರುಪಯೋಗ, ಅಸಮರ್ಪಕ ವಿದ್ಯುತ್ ಪೂರೈಕೆ, ಅನುದಾನ ಬಿಡುಗಡೆಯಲ್ಲಿ ತಾರತಮ್ಯ, ಸ್ವಜನ ಪಕ್ಷಪಾತದಲ್ಲಿ ಮುಳುಗಿರುವ ಬಿಜೆಪಿಯನ್ನು ಅಧಿಕಾರದ ಗದ್ದುಗೆಯಿಂದ ಕೆಳಗಿಳಿಸಬೇಕು ಎಂದು ಅವರು ಸಭೆಗೆ ಕರೆ ನೀಡಲಾಯಿತು.
ಪ್ರತಿಪಕ್ಷಗಳನ್ನು ಹದ್ದುಬಸ್ತಿನಲ್ಲಿಡಲು ಗಣಿ ಹಗರಣ, ಮಾನನಷ್ಟ ಮೊಕದ್ದಮೆ ಹೀಗೆ ಹತ್ತು ಹಲವು ತಂತ್ರಗಳನ್ನು ಹೆಣೆಯಲಾಗುತ್ತಿದೆ. ಬಿಜೆಪಿ ಪಕ್ಷವನ್ನು ಹದ್ದುಬಸ್ತಿನಲ್ಲಿಡದಿದ್ದರೆ ಮುಂದೊಂದು ದಿನ ಹಿಟ್ಲರ್ ಸಂಸ್ಕೃತಿಗೆ ನಾಂದಿಯಾಗುತ್ತದೆ ಎಂದು ಸಮಾವೇಶದಲ್ಲಿ ಹೇಳಲಾಯಿತು. ಬಿಜೆಪಿ ಕುತಂತ್ರ ರಾಜಕಾರಣವನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸದೆ ಇದ್ದರೆ ಜನರು ತಕ್ಕ ಪಾಠ ಕಲಿಸುವ ಸಮಯ ದೂರವಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಶೋಷಿತ ವರ್ಗದ ಸಮಾವೇಶದ ಬಗ್ಗೆ ತುಚ್ಛವಾಗಿ ಮಾತನಾಡಿರುವ ಸಚಿವ ಜನಾರ್ದನ ರೆಡ್ಡಿ ಮತ್ತು ಸಹೋದರರ ವಿರುದ್ಧ ಕುಮಾರಸ್ವಾಮಿ ಹರಿಹಾಯ್ದರು.ಗಣಿ ಸಂಪತ್ತನ್ನು ಜನಪರ ಕಾರ್ಯಗಳಿಗೆ ಬಳಸದೆ ನೀಚ ರಾಜಕೀಯ ಕಾರ್ಯಗಳಿಗಾಗಿ ಬಳಸಲಾಗುತ್ತಿದೆ. ಬಳ್ಳಾರಿ ಜನರನ್ನು ಗಣಿಧಣಿಗಳು ಮೂರ್ಖರನ್ನಾಗಿ ಮಾಡಿದ್ದಾರೆ ಎಂದು ಕಿಡಿ ಕಾರಿದರು.ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಪಕ್ಷಗಳು ಕೈಗೊಳ್ಳದಂತಹ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿತ್ತು. ಉತ್ತ್ತರ ಕರ್ನಾಟಕ ಭಾಗಕ್ಕೆ ಕೃಷ್ಣಾನದಿ ಯೋಜನೆ ರೂಪಿಸಿದ ವಿಷಯವನ್ನು ಪ್ರಸ್ತಾಪಿಸಲಾಯಿತು. ಮಹಿಳೆಯರಿಗೆ ಶೇ.33ರಷ್ಟು ರಾಜಕೀಯ ಮತ್ತು ಸಾಮಾಜಿಕ ಮೀಸಲಾತಿ ನೀಡಿದ ದೇವೇಗೌಡರ ಸಾಧನೆಯನ್ನು ಸಮಾವೇಶದಲ್ಲಿ ಕೊಂಡಾಡಲಾಯಿತು.
ಶೀಘ್ರದಲ್ಲೇ ಉತ್ತರ ಕರ್ನಾಟದಲ್ಲಿ ಪಾದಯಾತ್ರೆ ಕೈಗೊಳ್ಳುವುದಾಗಿ ಕುಮಾರಸ್ವಾಮಿ ತಿಳಿಸಿದರು. ಸಮಾವೇಶದಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವರು, ಹಾಲಿ, ಮಾಜಿ ಜೆಡಿಎಸ್ ಶಾಸಕರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)