ಪಾಕಿಸ್ತಾನ ಉಗ್ರರ ರಾಷ್ಟ್ರ, ಮಮೋಹನ್ ಸಿಂಗ್
ನವದೆಹಲಿ, ಜ. 6 : ಪಾಕಿಸ್ತಾನ ಬೆಂಬಲಿತ ಲಷ್ಕರ್ ಇ ತೊಯ್ಬಾ ಸಂಘಟನೆ ಮುಂಬೈ ಭಯೋತ್ಪಾದನೆ ನಡೆಸಿರುವುದು ತನಿಖೆಯಿಂದ ದೃಢಪಟ್ಟಿದೆ. ಈ ಭಯೋತ್ಪಾದನೆ ನಡೆಸಲು ಪಾಕಿಸ್ತಾನದ ಸರ್ಕಾರ ಆಡಳಿತ ಯಂತ್ರ ಸಂಪೂರ್ಣ ಸಹಕಾರ ನೀಡಿರುವುದು ಗುಪ್ತವಾಗೇನೂ ಉಳಿದಿಲ್ಲ ಎಂದು ಪ್ರಧಾನಮಂತ್ರಿ ಡಾ ಮನಮೋಹನ್ ಸಿಂಗ್ ಆರೋಪಿಸಿದರು.
ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ಮಂಗಳವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ಏರ್ಪಡಿಸಲಾಗಿದ್ದ ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸಿ ಭಾಷಣ ಮಾಡಿದ ಅವರು, ಮುಂಬೈ ದಾಳಿ ಪಾಕ್ ಕೃಪಾಪೋಷಿತ ಕೃತ್ಯ ಎಂದರು. ಇತ್ತೀಚಿನ ದಿನಗಳಲ್ಲಿ ಆ ದೇಶದ ನಾಯಕರು ನಡೆದುಕೊಳ್ಳುವ ರೀತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸಿಂಗ್, ಮುಂಬೈ ದಾಳಿಕೋರರ ರಕ್ಷಣೆಗೆ ಪಾಕ್ ಸರ್ಕಾರ ನಿಂತಿದೆ ಎಂದು ಕಿಡಿಕಾರಿದರು. ಪಾಕ್ ಉಗ್ರರ ತಾಣ ಎನ್ನುವುದನ್ನು ಸಾಬೀತುಪಡಿಸಿದೆ. ಅನ್ಯ ರಾಷ್ಟ್ರಗಳ ವಿರುದ್ಧ ಭಯೋತ್ಪಾದನೆ ಎಂತಹ ಹೀನ ಕೃತ್ಯವನ್ನು ಛೂಬಿಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬೈ ದಾಳಿಗೆ ಸಂಬಂಧಿಸಿದಂತೆ ನಮ್ಮಲ್ಲಿ ಸೂಕ್ತ ಸಾಕ್ಷ್ಯಾಧಾರಗಳಿವೆ. ಅಲ್ಲದೇ ಅಮೆರಿಕ ಫೆಡರಲ್ ಬ್ಯೂರೋ ಆಫ್ ಇನ್ ವೆಸ್ಟಿಗೇಶನ್ ತಂಡದ ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಏಕೈಕ ಉಗ್ರ ಕಸಬ್ ನ ಸ್ವಗ್ರಾಮ ಪಂಜಾಬ ಪ್ರಾಂತ್ಯದ ಓಕಾರ್ ಜಿಲ್ಲೆಯ ಫರೀದಕೋಟ್ ಗೆ ತೆರಳಿ ತನಿಖೆ ನಡೆಸಿದೆ. ಆ ತಂಡಕ್ಕೂ ಕೂಡ ಸ್ಪಷ್ಟವಾದ ಮಹತ್ವದ ಮಾಹಿತಿ ಸಿಕ್ಕಿದೆ. ಇಷ್ಟೆಲ್ಲಾ ಸಾಕ್ಷ್ಯಾಧಾರಗಳು ದೊರೆತರೂ ಪಾಕ್ ಸರ್ಕಾರ ತನ್ನ ಮೊಂಡುತನವನ್ನು ಬಿಟ್ಟಿಲ್ಲ. ಪಾಕ್ ಈ ನಿಲುವಿನಿಂದಾಗಿ ಭಾರತ ಹಾಗೂ ಪಾಕ್ ದೇಶಗಳಲ್ಲಿ ಯುದ್ಧ ವಾತಾವರಣ ಮೂಡಲು ಕಾರಣವಾಗಿದೆ ಎಂದು ಅವರು ಹರಿಹಾಯ್ದರು.
ಪಾಕ್ ಮೂಲದ ವ್ಯಕ್ತಿಗಳು ಸಮುದ್ರದ ಮೂಲಕ ಮುಂಬೈ ನಗರದೊಳಗೆ ನುಸುಳಿದ ಭಯೋತ್ಪಾದನೆ ಕೃತ್ಯ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಆದ್ದರಿಂದ ಭದ್ರತೆ ಕುರಿತು ಹೆಚ್ಚಿನ ಅದ್ಯತೆ ನೀಡಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು. ಉಗ್ರರ ಭಯೋತ್ಪಾದನಾ ಕೃತ್ಯಕ್ಕೆ ಕಡಿವಾಣ ಹಾಕಲು ಸರ್ಕಾರ ಬದ್ಧ ಎಂದು ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದರು. ಆಯಾ ರಾಜ್ಯಗಳ ಮುಖ್ಯಸ್ಥರು ಭದ್ರತೆ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾರಗಳಿಗೆ ಸಂಪೂರ್ಣ ನೀಡಲು ಸಿದ್ದವಿದೆ. ಹಾಗೂ ಗುಪ್ತಚರ ವಿಚಾರಗಳ ವಿನಿಮಯವನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಪ್ರಧಾನಿ ಸಿಂಗ್ ಹೇಳಿದರು.
(ದಟ್ಸ್
ಕನ್ನಡ
ವಾರ್ತೆ)
ಭಾರತದ
ಸಾಕ್ಷಿಯಲ್ಲಿ
ದಮ್ಮಿಲ್ಲ
ಎಂದ
ಪಾಕ್