ಮಧುಗಿರಿ ಬಳಿ ಕರಡಿ ದಾಳಿಗೆ ಹೋಂಗಾರ್ಡ್ ಬಲಿ
ಮಧುಗಿರಿ, ಡಿ. 26 : ಡಿಸೆಂಬರ್ 27ರಂದು ನಡೆಯಲಿರುವ ವಿಧಾನಸಭೆ ಉಪ-ಚುನಾವಣೆಯ ಸಿದ್ಧತೆಗೆಂದು ಹಾವೇರಿಯಿಂದ ಆಗಮಿಸಿದ್ದ ಹೋಂಗಾರ್ಡ್ ಕರಡಿಯ ದಾಳಿಗೆ ಬಲಿಯಾಗಿದ್ದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನೊಬ್ಬ ಕರಡಿ ಕಡಿತದಿಂದ ತೀವ್ರವಾಗಿ ಗಾಯಗೊಂಡಿದ್ದು ಜೀವನ್ಮರಣದ ಸ್ಥಿತಿಯಲ್ಲಿದ್ದಾರೆ.
ಅತ್ಯಂತ ಸೂಕ್ಷ್ಮ ಮತಕ್ಷೇತ್ರವೆನಿಸಿರುವ ಮತ್ತು ಅತಿ ಪ್ರತಿಷ್ಠೆಯ ಕಣವಾಗಿರುವ ತುಮಕೂರಿ ಜಿಲ್ಲೆಯ ಮಧುಗಿರಿಗೆ ರಾಜ್ಯದ ಎಲ್ಲೆಡೆಯಿಂದ ಭದ್ರತೆಯ ದೃಷ್ಟಿಯಿಂದ ಹೋಂಗಾರ್ಡ್ ಗಳನ್ನು ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. ಮಧುಗಿರಿಯ ಬಳಿಯಿರುವ ಕರಡಿ ಗುಡ್ಡದ ಬಳಿ ಇವರ ತಂಡ ಬೀಡುಬಿಟ್ಟಿದ್ದಾಗ, ಹತ್ತಿರದ ಕಾಡಿನಿಂದ ಎರಡು ಕರಡಿಗಳು ಶುಕ್ರವಾರ ಬೆಳಿಗ್ಗೆ ಏಕಾಏಕಿ ದಾಳಿ ನಡೆಸಿವೆ.
ತೀವ್ರವಾಗಿ ಗಾಯಗೊಂಡ ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಹೋಂಗಾರ್ಡ್ ಮೇಳಹಳ್ಳಿ ನೆಲಮಂಗಲದ ಬಳಿ ಸಾವನ್ನಪ್ಪಿದ್ದಾರೆ. ಕೆಎಸ್ಆರ್ ಟಿಸಿ ಚಾಲಕ ಗೋವಿಂದಪ್ಪ ಹೊಂಬಾಳಿ ಎಂಬುವವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಲಾಗಿದೆ. ಇವರೆಲ್ಲ ಬೇರೆ ಜಿಲ್ಲೆಗಳಿಂದ ಬಂದಿದ್ದರಿಂದ ಇವರಿಗೆ ಕರಡಿಯ ದಾಳಿಯ ಅರಿವಿರಲಿಲ್ಲ.
ಜಿಲ್ಲಾಧಿಕಾರಿ ಸೋಮಶೇಖರ್ ಅವರು ಸ್ಥಳಕ್ಕೆ ಧಾವಿಸಿ ಅಸುನೀಗಿದ ಹೋಂಗಾರ್ಡ್ ಮತ್ತು ಗಾಯಗೊಂಡಿರುವ ಬಸ್ ಚಾಲಕನಿಗೆ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.
ಇಲ್ಲಿ ಕರಡಿಗಳ ದಾಳಿ ಆಗಾಗ ಆಗುತ್ತಿದ್ದರೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುವುದು ಸ್ಥಳೀಯರ ಆರೋಪ. ಕರಡಿ ದಾಳಿಯ ಬಗ್ಗೆ ಮೊದಲೇ ನಿಗಾ ವಹಿಸಿದ್ದರೆ ಇಂಥ ಘಟನೆ ಸಂಭವಿಸುವುದನ್ನು ತಡೆಯಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಸೂಕ್ತವಾಗಿ ಮತದಾನ ನಡೆಯಲು ಅನುವಾಗಲೆಂದು ಮತ್ತು ಮತಪೆಟ್ಟಿಗೆಗಳ ಭದ್ರತೆಗೆಂದು ಇಲ್ಲಿಗೆ ಆಗಮಿಸಿರುವ ಸಿಬ್ಬಂದಿಗೇ ಭದ್ರತೆ ಸಿಗದಿರುವುದು ಮಾತ್ರ ವಿಪರ್ಯಾಸ.
(ದಟ್ಸ್ ಕನ್ನಡ ವಾರ್ತೆ)