ಮುಂಬೈ ಕೃತ್ಯ ಅತ್ಯಂತ ಹೇಯ, ಪೇಜಾವರ ಶ್ರೀಗಳು
ರಾಯಚೂರು, ಡಿ.5 : ಪಾಕಿಸ್ತಾನದಲ್ಲಿ ಉಗ್ರರಿಗೆ ತರಬೇತಿ ನೀಡಿರುವುದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಉಗ್ರರಿಗೆ ತರಬೇತಿ ನೀಡುವ ಕೇಂದ್ರದ ಮೇಲೆ ದಾಳಿ ನಡೆಸುವುದು ತಪ್ಪಲ್ಲ ಎಂದು ಪೇಜಾವರ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗೊಂದಿಗೆ ಮಾತನಾಡಿದ ಅವರು, ಮುಂಬೈ ಭಯೋತ್ಪಾದನೆ ಅತ್ಯಂತ ಕ್ರೋರ. ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಉಗ್ರರಿಗೆ ಶಿಕ್ಷೆ ನೀಡಲೆಬೇಕು ಎಂದರು. ಕಳೆದ ವಾರ ಮುಂಬೈನಲ್ಲಿ ನಡೆದ ಭಯೋತ್ಪಾದನೆ ತೀವ್ರವಾಗಿ ಖಂಡಿಸಿದ ಶ್ರೀಗಳು, ಇದರ ವಿರುದ್ಧ ಎಲ್ಲರೂ ಒಗ್ಗಟ್ಟಿನ ಪ್ರದರ್ಶನ ತೋರಬೇಕಿದೆ ಎಂದು ಹೇಳಿದರು.
ಭಾರತದ ಮೇಲೆ ಅನೇಕ ಬಾರಿ ದಾಳಿಗಳನ್ನು ಭಯೋತ್ಪಾದಕರು ಮಾಡಿದ್ದಾರೆ. ಪಾಕಿಸ್ತಾನದ ಬೆಂಬಲಿತ ಉಗ್ರರು ಭಾರತದ ಮೇಲೆ ಭಯೋತ್ಪಾದಕ ಕೃತ್ಯಗಳನ್ನು ಎಸಗುತ್ತಿದ್ದಾರೆ. ಇಂತವರಿಗೆ ಶಿಕ್ಷೆ ಆಗಲೇ ಬೇಕು. ಜೊತೆಗೆ ಪಾಕಿಸ್ತಾನದಲ್ಲಿ ತರಬೇತಿ ನೀಡುತ್ತಿರುವ ಕೇಂದ್ರದ ಮೇಲೂ ದಾಳಿ ನಡೆಸಿದರೆ ತಪ್ಪಿಲ್ಲ. ಉಗ್ರರ ಹುಟ್ಟಡಗಿಸಲು ಪಾಕ್ ಸರ್ಕಾರ ಭಾರತದೊಂದಿಗೆ ಕೈಜೋಡಿಸುವ ಅಗತ್ಯವಿದೆ ಎಂದು ಪೇಜಾವರ ಶ್ರೀಗಳು ಹೇಳಿದರು.
ಮುಸ್ಲಿಂ ಧರ್ಮಿಯರು ಅನಗತ್ಯ ಹೇಳಿಕೆ ನೀಡುವುದಿಲ್ಲ ಬಿಟ್ಟು, ದೇಶದ್ರೋಹಿ ಕೆಲಸಗಳಲ್ಲಿ ತೊಡಗಿರುವ ತಮ್ಮ ಜನಾಂಗದವರಿಗೆ ತಿಳುವಳಿಕೆ ನೀಡುವುದಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು. ಭಾರತದಲ್ಲಿ ಭಯೋತ್ಪಾದನೆ ಮೀತಿಮೀರಿದೆ, ಇದನ್ನು ಹತ್ತಿಕ್ಕುವ ಕೆಲಸದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಗಂಭೀರ ಚಿಂತನೆ ನಡೆಸಬೇಕಾಗಿದೆ. ಅಗತ್ಯ ಬಿದ್ದರೆ ಭಯೋತ್ಪಾದನೆ ಮಟ್ಟಹಾಕಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)