ಬಿಜೆಪಿ ಸರ್ಕಾರವನ್ನು ಕಿತ್ತೆಸಿಯಿರಿ, ಜೆಡಿಎಸ್
ಬೆಂಗಳೂರು, ಡಿ.5 : ರಾಜ್ಯದ ಖಜಾನೆ ಈಗಾಗಲೇ ಬರಿದಾಗಿದೆ. ಉಪಚುನಾವಣೆ ನಂತರ ಇನ್ನಷ್ಟು ಖಾಲಿಯಾಗುವ ಮೂಲಕ ಸರ್ಕಾರ ದಿವಾಳಿಯಾಗಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಲೇವಡಿ ಮಾಡಿದರು. ಈ ಸಂದರ್ಭದಲ್ಲಿ ಮಧುಗಿರಿ ಮತ್ತು ಹುಕ್ಕೇರಿ ಕ್ಷೇತ್ರಗಳನ್ನು ಬಿಟ್ಟು ಉಳಿದ ಆರು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಸರ್ಕಾರದ ದುರಾಡಳಿದಿಂದ ಜನರು ಬೇಸತ್ತಿದ್ದಾರೆ. ಕೋಮುವಾದಿ ಸರ್ಕಾರದ ಸುಳ್ಳು ಯೋಜನೆಗಳಿಂದ ಜವರಿಗೆ ಭ್ರಮನಿರಶನ ಉಂಟಾಗಿದೆ. ಆದ್ದರಿಂದ ಉಪಚುನಾವಣೆಯಲ್ಲಿ ಬಿಜೆಪಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರಕ್ಕೆ ನೀತಿ ನಿಯಮ ಎಂಬುದೇ ಇಲ್ಲ. ಜನಪರ ಕಾಳಜಿ ಇಲ್ಲದ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯಾದರೆ ಇನ್ನೆನಾಗಲಿದೆ. ಅಧಿಕಾರಕ್ಕೆ ಬಂದಾಗಿನಿಂದ ಮಠಮಾನ್ಯಗಳಿಗೆ ಹಣ ನೀಡುವುದನ್ನು ಬಿಟ್ಟರೆ ಈ ಸರ್ಕಾರದ ಸಾಧನೆ ಶೂನ್ಯ ಎಂದು ಕುಮಾರಸ್ವಾಮಿ ಆಕ್ರೋಷ ವ್ಯಕ್ತಪಡಿಸಿದರು.
ರಾಜ್ಯದ ಮುಖ್ಯಮಂತ್ರಿಯಾಗಿರುವ ವ್ಯಕ್ತಿಯೊಬ್ಬರು ಜನಪರ ಕೆಲಸಗಳನ್ನು ಮಾಡಬೇಕೆ ಹೊರತು ಇನ್ನೊಂದು ಪಕ್ಷವನ್ನು ಸರ್ವನಾಸ ಮಾಡುವುದಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಜೆಡಿಎಸ್ ನಾಶ ಮಾಡುವ ಕೆಲಸದಲ್ಲಿಯೇ ತೊಡಗಿದ್ದಾರೆ. ಆಪರೇಷನ್ ಕಮಲದ ಹೆಸರಿನಲ್ಲಿ ಸಂವಿಧಾನದ ಅಶಯವನ್ನ ಗಾಳಿಗೆ ತೂರಿ ಅಸೆ ಅಮಿಷಗಳನ್ನು ಒಡ್ಡಿ ಶಾಸಕರನ್ನು ಖರೀದಿಮಾಡಿರುವುದು ಅತ್ಯಂತ ಖಂಡನೀಯ ಕೆಲಸ ಎಂದು ಕಟು ಶಬ್ಧಗಳಲ್ಲಿ ನಿಂದಿಸಿದರು.
ಮಧುಗಿರಿ ಕ್ಷೇತ್ರದ ಅಭ್ಯರ್ಥಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡದ ಅವರು, ಹಿರಿಯ ಕೆಎಎಸ್ ಅಧಿಕಾರಿ ಸ್ಪರ್ಧಿಸಲು ಸ್ವಯಂ ನಿವೃತ್ತಿ ಬಯಸಿ ಅರ್ಜಿ ಸಲ್ಲಿಸಿದ್ದರು. ಆದರೆ ಉಳಿದ ಎಲ್ಲರಿಗೂ ಸ್ವಯಂ ನಿವೃತ್ತಿಗೆ ಅಸ್ತು ಎಂದ ಸರ್ಕಾರ, ವೀರಭದ್ರಯ್ಯನವರಿಗೆ ಮಾತ್ರ ಈ ಅವಕಾಶ ನೀಡಲಿಲ್ಲ ಏಕೆ ಎಂದು ಪ್ರಶ್ನಿಸಿದರು. ಪಕ್ಷದ ಬಲವರ್ಧನೆಗಾಗಿ ಗಟ್ಟಿಗೊಳಿಸುವ ಸಲುವಾಗಿ ಕೆಲ ಗಟ್ಟಿ ನಿರ್ಧಾರಕ್ಕೆ ಬರಬೇಕಾಗಿದೆ ಎಂದು ಮಧುಗಿರಿ ಕ್ಷೇತ್ರದಲ್ಲಿ ಅನಿತಾ ಅವರ ಸ್ಪರ್ಧೆಯನ್ನು ಅವರ ಸಮರ್ಥಿಸಿಕೊಂಡರು.
ಆರು ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಹೀಗಿದೆ
ಮದ್ದೂರು
-
ಕಲ್ಪನಾ
ಸಿದ್ದರಾಜು
ದೊಡ್ಡಬಳ್ಳಾಪುರ
-
ನರಸಿಂಹಯ್ಯ
ದೇವದುರ್ಗ
-
ಡಾ.
ರಘು
ಅರಭಾವಿ
-
ಅರವಿಂದ
ದಳವಾಯಿ
ಕಾರವಾರ
-
ದೇವದಾಸ್
ಗಾವಂಕರ್
ತುರುವೇಕೆರೆ
-
ಎಂ
ಟಿ
ಕೃಷ್ಣಪ್ಪ
(ದಟ್ಸ್ ಕನ್ನಡ ವಾರ್ತೆ)