ತಾಜ್ ಮೇಲೆ ದಾಳಿ ಮೊದಲೇ ಗೊತ್ತಿತ್ತು: ಟಾಟಾ
ನವದೆಹಲಿ, ನ. 30 : ತಾಜ್ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆಗಳಿವೆ ಎನ್ನುವ ಅಂಶ ಮೊದಲೇ ತಿಳಿದಿತ್ತು ಎಂದು ಟಾಟಾ ಕಂಪನಿ ಮುಖ್ಯಸ್ಥ ರತನ್ ಟಾಟಾ ಸ್ಪಷ್ಟಪಡಿಸಿದ್ದಾರೆ. ಸಿಎನ್ಎನ್ ವಾರ್ತಾ ವಾಹಿನಿಗೆ ವಿಶೇಷ ಸಂದರ್ಶನ ನೀಡಿದ ಟಾಟಾ, ತಾಜ್ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆಗಳು ಇರುವುದನ್ನು ಮನಗಂಡು ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಆದರೆ ಉಗ್ರರ ಭಯಾನಕ ದಾಳಿಯಿಂದ ತಾಜ್ ಭದ್ರತಾ ಪಡೆ ಕಾರ್ಯ ವಿಫಲವಾಗಿದೆ ಎಂದು ಅವರು ತಿಳಿಸಿದರು.
105 ವರ್ಷಗಳ ಇತಿಹಾಸ ಹೊಂದಿರುವ ತಾಜ್ ಹೋಟೆಲ್ ಉಗ್ರರ ಹಿಟ್ ಲಿಸ್ಟ್ ನಲ್ಲಿ ಇತ್ತು. ಎಚ್ಚರಿಕೆಯ ಸಂದೇಶಗಳು ಕೂಡಾ ಅನೇಕ ಸಲ ಬಂದಿದ್ದವು. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿತ್ತು. ಆದರೆ, ಉಗ್ರರ ನಡೆಸಿದ ವ್ಯವಸ್ಥಿತ ದಾಳಿಯಿಂದ ತಾಜ್ ಹೋಟೆಲ್ ತನ್ನ ವೈಭವವನ್ನು ಕಳೆದುಕೊಂಡಿರುವುದು ನಿಜ. 100 ಕೋಟಿಗೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ತಾಜ್ ದುರಸ್ತಿಯ ನಂತರ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸೇವೆಗೆ ಒದಗಿಸಲಾಗಿಸಲಾಗುವುದು ಎಂದು ಅವರು ಹೇಳಿದರು. ತಾಜ್ ಹೋಟೆಲ್ ಭದ್ರತೆಗೆ ಸಂಬಂಧಿಸಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಭದ್ರತೆ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾದ ಭದ್ರತೆಯನ್ನು ಕೈಗೊಳ್ಳಲಾಗುವುದು ಎಂದು ರತನ್ ಟಾಟಾ ಸ್ಪಷ್ಟಪಡಿಸಿದ್ದಾರೆ.
ಸತತ 59 ಗಂಟೆಗಳ ಕಾಲ ನಡೆಸಿ ಕಾರ್ಯಚರಣೆಯಲ್ಲಿ ತಾಜ್ ಹೋಟೆಲ್, ನಾರಿಮನ್ ಹೌಸ್ ಮತ್ತು ಹೋಟೆಲ್ ಒಬೆರಾಯ್ ಉಗ್ರರ ಕಪಿಮುಷ್ಠಿಯಿಂದ ವಶಪಡಿಸಿಕೊಳ್ಳಲು ರಾಷ್ಟ್ರೀಯ ಭದ್ರತಾ ಪಡೆ ಯಶಸ್ವಿಯಾಗಿದೆ. ಘಟನೆಯಲ್ಲಿ 185 ಮೃತಪಟ್ಟು, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಕೇರಳ ಮೂಲದ ಕನ್ನಡಿಗ ಮೇಜರ್ ಸಂದೀಪ್ ಉನ್ನಿಕೃಷ್ಣನ್, ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಎನ್ ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್, ಡಿಸಿಪಿ ಅಶೋಕ್ ಕಾಮ್ಟೆ ಮೃತಪಟ್ಟವರಲ್ಲಿ ಪ್ರಮುಖರಾಗಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications